ಕಳೆದ ಐದು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿರುವುದನ್ನು ನೋಡಿ ಮಹಾತ್ಮ ಗಾಂಧೀಜಿ ಅವರ ಆತ್ಮ ನೋವಿನಲ್ಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರಾಜ್ ಘಾಟ್ನಲ್ಲಿರುವ ಗಾಂಧಿ ಸಮಾಧಿಗೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತನಾಡಿದರು. ಸುಳ್ಳು ಹರಡುವ ರಾಜಕೀಯದಲ್ಲಿ ತೊಡಗಿಸಿಕೊಂಡಿರುವವರು ಮಹಾತ್ಮ ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳಲಾರರು ಎಂದು ಜರೆದರು,.
ತಮ್ಮಷ್ಟಕ್ಕೇ ತಾವೇ ಶ್ರೇಷ್ಠರು ಎಂದು ತಿಳಿರುವವರು ಗಾಂಧಿಯ ತ್ಯಾಗವನ್ನು ಅರ್ಥಮಾಡಿಕೊಳ್ಳಬೇಕು. ಸುಳ್ಳು ರಾಜಕೀಯ ಮಾಡುವವರಿಗೆ ಗಾಂಧಿಯ ಅಹಿಂಸಾ ತತ್ತ್ವ ಅರ್ಥವಾಗುವುದಿಲ್ಲ ಎಂದು ಬಿಜೆಪಿ ಹಾಗೂ ಆರ್ಎಸ್ಎಸ್ಗೆ ಪರೋಕ್ಷವಾಗಿ ಮಾತಿನ ಚಾಟಿ ಬೀಸಿದರು.
ಭಾರತ ಮತ್ತು ಗಾಂಧಿ ಎಂದಿಗೂ ಒಂದೇ, ಆದರೆ, ಕೆಲವರು ಭಾರತವನ್ನು ಆರ್ಎಸ್ಎಸ್ ಸಮವಾಗಿ ನೋಡಲು ಬಯಸುತ್ತಿದ್ದಾರೆ ಎಂದು ಸೋನಿಯಾ ಕಿಡಿಕಾರಿದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಆದರ್ಶಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಭಾರತ ತನ್ನ ಸಂಸ್ಕೃತಿ, ತತ್ವಾಧಾರಿತವಾಗಿಯೇ ಬೆಳೆದಿದೆ. ಆದರೆ ಕಳೆದ ಐದು ವರ್ಷದಿಂದ ಮಾತ್ರ ಗಾಂಧೀ ತತ್ವ, ಪರಿಕಲ್ಪನೆಯ ಭಾರತ ನಿರ್ಮಾಣವಾಗಿಲ್ಲ. ಕೆಲವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವಗಳನ್ನು ಭಾರತದ ಸಂಕೇತವನ್ನಾಗಿ ಮಾರ್ಪಾಡು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಗಾಂಧೀ ಚಿಂತನೆಯನ್ನು ಬದಿಗಿರಿಸಿ, ಸರ್ವಾಧಿಕಾರದ ಚಿಂತನೆ ಬೆಳೆಸುತ್ತಿದ್ದಾರೆ. ಇಂತಹವರಿಗೆ ಗಾಂಧಿ ಎಂದಿಗೂ ಅರ್ಥವಾಗುವುದಿಲ್ಲ ಎಂದು ಜರಿದಿದ್ದಾರೆ.
ಮಹಾತ್ಮಾ ಗಾಂಧೀಜಿ ಅವರ ಆದರ್ಶ ಹಾಗೂ ತತ್ವಗಳ ಅನುಸರಣೆ ಮಾಡುತ್ತಲೇ ಬಂದಿರುವ ಕಾಂಗ್ರೆಸ್, ಹಲವಾರು ವರ್ಷಗಳ ಕಾಲ, ಗಾಂಧಿ ದಾರಿಯಲ್ಲೇ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ದೇಶದಲ್ಲಿ ಉದ್ಯೋಗ, ಮಹಿಳಾ ಸಬಲೀಕರಣ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಕಂಡಿತ್ತು. ಕಾಂಗ್ರೆಸ್ ಮಾತ್ರವೇ ಗಾಂಧೀಜಿಯ ತತ್ವಗಳನ್ನು ಅನುಸರಿಸುತ್ತಾ ಬಂದಿದೆ. ಅಂತೆಯೇ ಮುಂದೆಯೂ ಅನುಸರಿಸಲಿದೆ ಎಂದು ಹೇಳಿದರು.
Discussion about this post