ಬೆಂಗಳೂರು : love you racchu ಸಿನಿಮಾ ಶೂಟಿಂಗ್ ವೇಳೆ ನಡೆದ ದುರ್ಘಟನೆಯಲ್ಲಿ ವಿವೇಕ್ ಅನ್ನುವ ಫೈಟರ್ ಮೃತಪಟ್ಟಿದ್ದರು. ಇಡೀ ಘಟನೆ ಹೊಣೆಗಾರರಾಗಿರುವ ಚಿತ್ರದ ನಿರ್ಮಾಪಕರು ಎಲ್ಲಿದ್ದಾರೆ ಅನ್ನುವುದು ಇನ್ನೂ ಗೊತ್ತಿಲ್ಲ. ನಿಜಕ್ಕೂ ಜವಬ್ದಾರಿ ಅನ್ನುವುದು ಇರುತ್ತಿದ್ರೆ ಇಷ್ಟು ಹೊತ್ತಿಗೆ ಅವರು ಕಾಣಿಸಿಕೊಳ್ಳಬೇಕಿತ್ತು. ಅಮಾಯಕ ಜೀವವೊಂದು ಬಲಿಯಾದರೂ ಅವರು ತಲೆ ಮರೆಸಿಕೊಂಡಿರುವುದು ದುರಂತವೇ ಸರಿ.
ಈ ನಡುವೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬಿಡದಿ ಪೊಲೀಸರು, ಮಂಗಳವಾರ ನಟಿ ರಚಿತಾ ರಾಮ್ ಅವರನ್ನು ವಿಚಾರಣೆಗೆ ಕರೆದಿದ್ದರು. ಈ ವೇಳೆ ರಚಿತಾ ರಾಮ್ ನಾನು ಶೂಟಿಂಗ್ ಸ್ಥಳದಲ್ಲಿ ಇರಲಿಲ್ಲ, ಆ ದಿನ ಮೈಸೂರಿನಲ್ಲಿ ಇದ್ದೆ ಎಂದು ವಿವರಣೆ ಕೊಟ್ಟಿದ್ದಾರಂತೆ. ಜೊತೆಗೆ ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರಚಿತಾ ಇದು ನಿರ್ಲಕ್ಷ್ಯದಿಂದ ಆಗಿರುವ ದುರ್ಘಟನೆ ಅನ್ನುವುದನ್ನು ಒಪ್ಪಲಿಲ್ಲ. ಯಾರು ಬೇಕೂ ಅಂತಾ ಮಾಡ್ತಾರೆ ಎಂದು ಆಗಿರುವ ಎಡವಟ್ಟಿನ ಬಗ್ಗೆ ಸ್ಪಷ್ಟ ನಿಲುವು ತಳೆಯಲೇ ಇಲ್ಲ.
ಇದೀಗ ಘಟನೆ ನಡೆದಾಗ ಶೂಟಿಂಗ್ ಸ್ಪಾಟ್ ನಲ್ಲಿದ್ದ ಚಿತ್ರದ ನಾಯಕ ಅಜಯ ರಾವ್ ಅವರಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ಅಜಯ್ ರಾವ್ ಅವರಿಗೆ ಬಂಧನ ಭೀತಿ ಕಾಡುತ್ತಿದ್ದು, ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ. ಈ ಸಂಬಂಧ ರಾಮನಗರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಅವರು ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಆಗಸ್ಟ್ 26 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
Discussion about this post