ವಿಜಯಪುರ: ಪುಲ್ವಾಮಾದಲ್ಲಿ ಎರಡು ದಿನಗಳ ಹಿಂದೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ರುಂಡ ಚೆಂಡಾಡುತ್ತಲೇ ಹುತಾತ್ಮರಾದ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ(35) ಅವರ ಅಂತ್ಯಕ್ರಿಯೆ ಇಂದು ಸರ್ಕಾರಿ ಗೌರವದೊಂದಿಗೆ ನಡೆಯಿತು.
ಉಕ್ಕಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕರ ದರ್ಶನ ಅಂತ್ಯದ ಬಳಿಕ ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಇನ್ನು ಪತಿಯ ಅಗಲಿಕೆಯ ನಡುವೆಯೂ ಉಗ್ರರ ವಿರುದ್ಧ ಗುಡುಗಿದ ಕಾಶಿರಾಯ ಬೊಮ್ಮನಳ್ಳಿ ಪತ್ನಿ ಸಂಗೀತಾ, ನನ್ನ ಮಗ ಭಗತ್ನನ್ನೂ ಸಹ ಸೇನೆಗೆ ಕಳುಹಿಸುವೆ ಅಂದಿದ್ದಾರೆ.
“ ಅವರ ಅಪ್ಪ ಅವನನ್ನ ಸ್ಟ್ರಾಂಗ್ ಮಾಡು ಅನ್ನುತ್ತಿದ್ದರು. ನಾನು ಅವರ ಮಗನನ್ನ ಸ್ಟ್ರಾಂಗ್ ಮಾಡುತ್ತೇನೆ. ಅವರ ಅಪ್ಪ ಹೇಳಿದಂತೆ ಅವನನ್ನು ಸೈನಿಕ ಮಾಡುತ್ತೇನೆ ಅಂದರು. ಸಂಗೀತಾ ಅವರು ಆಡಿದ ಮಾತುಗಳು ಅಂತಿಮ ದರ್ಶನಕ್ಕೆ ಬಂದಿದ್ದ ಜನರ ಆತ್ಮವಿಶ್ವಾಸ, ಧೈರ್ಯ ಹಾಗು ದೇಶಪ್ರೇಮವನ್ನು ನೂರ್ಮಡಿಗೊಳಿಸಿದೆ.
ಇನ್ನು 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕಾಶೀರಾಯ ಅವರ ದೇಶಪ್ರೇಮಕ್ಕೆ ಎರಡೇ ಘಟನೆಗಳ ಸಾಕ್ಷಿ ಸಾಕು. ಊರಿಗೆ ಬಂದಾಗ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದ ಕಾಶೀರಾಯ, ಈ ಮೂಲಕ ಊರ ಮಂದಿಯನ್ನು ದೇಶಪ್ರೇಮದ ಕೆಚ್ಚನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದರು. ಅಷ್ಟು ಮಾತ್ರವಲ್ಲದೆ, ತಮ್ಮ ಮಗನಿಗೆ ಭಗತ್ಸಿಂಗ್ ಎಂದು ಹೆಸರಿಟ್ಟಿದ್ದರು.
ಯಾರೋ ಬುದ್ದಿಜೀವಿಗಳು ಹಿಂದೊಮ್ಮೆ ಹೇಳಿದ್ದರು, ಸೈನ್ಯಕ್ಕೆ ಯುವಕರು ಸಂಬಳಕ್ಕಾಗಿ ಸೇರುತ್ತಾರೆ ಅಂದಿದ್ದರು. ಇಂತಹ ಘಟನೆಗಳು ಅವರ ಚಿಂತನೆಯನ್ನು ಬದಲಾಯಿಸುವಂತಿದ್ದರೆ ಚೆಂದ.
Discussion about this post