ಬೆಂಗಳೂರು : ಕಳೆದ ಕೆಲವು ದಿನಗಳಿಂದ ಕನ್ನಡ ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗಾಗಿ ಏನು ಮಾಡಿದ್ದಾರೆ. ಕೊರೋನಾದಂತಹ ಸಂಕಷ್ಟ ಸಮಯದಲ್ಲಿ ಬಾಲಿವುಡ್ ನಟ ಮಾಡಿದ ಕೆಲಸ ಇವರಿಗೆಲ್ಲಾ ಮಾದರಿಯಾಗಬೇಕಿತ್ತು ಅನ್ನುವ ಬಹಿರಂಗ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೇ ನೋಡಿದರೆ ಅವರು ಬರದೆ ಪತ್ರದಲ್ಲಿ ಖಂಡಿತಾ ಸತ್ಯಾಂಶವಿದೆ. ದೊಡ್ಡ ದೊಡ್ಡ ಸ್ಟಾರ್ ಅನ್ನಿಸಿಕೊಂಡವರು ಕೊರೋನಾ ಸಂದರ್ಭದಲ್ಲಿ ಸಿಎಂ, ಪಿಎಂ ನಿಧಿಗೆ ಕಾಸು ಕೊಟ್ಟು ಸುಮ್ಮನಾಗಿದ್ದರು, ಅಲ್ಲಿಗೆ ಕೊಟ್ಟಿದ್ದು ದೊಡ್ಡ ಮೊತ್ತವಾಗಿರಬಹುದು ಆದರೆ ಕೊರೋನಾ ಕಾರಣದಿಂದ ಬೀದಿಗೆ ಬಿದ್ದವರಿಗೆ ಅದರಿಂದ ಸಹಾಯವಾಗಿದೆಷ್ಟು.
ಈ ಕಾರಣದಿಂದಲೇ ವೀರಕಪುತ್ರ ಶ್ರೀನಿವಾಸ ಎಂಬವರು ಬಹಿರಂಗ ಪತ್ರವೊಂದನ್ನು ಬರೆದು, ಕನ್ನಡದ ಸ್ಟಾರ್ ನಟರು ಮಾಡಬೇಕಾಗಿರುವುದೇನು ಅನ್ನುವ ಸಲಹೆಯೊಂದನ್ನು ಕೊಟ್ಟಿದ್ದರು. ಹಾಗೇ ನೋಡಿದರೆ ಇದೊಂದು ಅತ್ಯಂತ ಅಮೂಲ್ಯ ಸಲಹೆಯಾಗಿತ್ತು.
“ ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ.. ಅನ್ನೋ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ. ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮ್ಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದಿಡಿ.
ಎಷ್ಟೋ ಜನ ಸಣ್ಣ ಸಣ್ಣ ರೂಮುಗಳಲ್ಲಿ, ಸಿಂಗಲ್ ಬೆಡ್ ರೂಮ್ ಇರುವ ಮನೆಗಳಲ್ಲಿ ವಾಸಿಸ್ತಿದ್ದಾರೆ. ದುಡಿಯಲು ಹೊರಗಡೆ ಹೋಗುವ ಒಬ್ಬರಿಗೆ ಕೊರೋನ ಬಂದ್ರೆ ಮನೆಯವರೆಲ್ಲರೂ ಕೊರೋನ ಸೋಂಕಿಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ. ಅಂತಹವರಿಗೆ ನಿಮ್ಮ ಕೋವಿಡ್ ಕೇರ್ ಸೆಂಟರ್ ಆದ್ಯತೆ ನೀಡಲಿ. ಜೊತೆಗೆ ಸರ್ಕಾರದ ಜೊತೆ ನಿರಂತರ ಸಂಪರ್ಕ ಸಾಧಿಸಿ ನಿಜಕ್ಕೂ ಅಗತ್ಯವಿರುವಂತಹವರಿಗೆ ಹಾಸಿಗೆ, ಆಕ್ಸಿಜನ್ ಗಳನ್ನು ದೊರಕಿಸಿಕೊಡಿ!
ಕೊರೋನ ಬಂದಿದ್ದಕ್ಕೆ ಜನ ಸಾಯ್ತಿಲ್ಲ, ಸರ್ಕಾರ ಚಿಕಿತ್ಸೆನೀಡಲು ವಿಫಲವಾಗಿರುವ ಕಾರಣಕ್ಕೆ ಜನ ಸಾಯ್ತಿರೋದು. ಅಂತಹ ಅಸಹಾಯಕರಿಗೆ ತಮ್ಮ ಸಹಾಯಹಸ್ತ ಸಿಗಬಾರದೇಕೆ? ನಿಮ್ಮ ಮಾತನ್ನು ಅಷ್ಟು ಸಲೀಸಾಗಿ ಅಲ್ಲಗೆಳೆಯುವಂತಹ ಯಾವ ಮಂತ್ರಿಗಳೂ, ಆಸ್ಪತ್ರೆಗಳೂ ನಮ್ಮ ಕರ್ನಾಟಕದಲ್ಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಬಾರದೇಕೆ? ಅನ್ನುವುದು ಪತ್ರದ ಒಕ್ಕಣೆಯಾಗಿತ್ತು.
ಈ ಸಲಹೆ ಅದೆಷ್ಟು ಸ್ಟಾರ್ ನಟರ ಮನಸ್ಸಿಗೆ ತಟ್ಟಿದೆಯೋ ಗೊತ್ತಿಲ್ಲ. ಖಂಡಿತಾ ಓದಿರುತ್ತಾರೆ. ಈ ಪತ್ರ ವೈರಲ್ ಆದ ಬೆನ್ನಲ್ಲೇ ಕಿಚ್ಚ ಸುದೀಪ್ ಅವರ ಹೆಸರಿನ ಟ್ರಸ್ಟ್ ಒಂದರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನಾವು ಮಾಡಿದ್ದೇನು ಅನ್ನುವ ಒಕ್ಕಣೆಯ ಪತ್ರವೊಂದು ಹರಿದಾಡುತ್ತಿದೆ. ಕಿಚ್ಚ ಸುದೀಪ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರೂ, ಜನರ ಸೇವೆ ಹೇಗೆ ನಡೆಯುತ್ತಿದೆ ಅನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಜೊತಗೆ ನೀವೆನ್ ಮಾಡಿದ್ರಿ, ಅವರೇನ್ ಮಾಡಿದ್ರು ಅಂತಾ ಪ್ರಶ್ನೆ ಮಾಡೋ ಸಮಯ ಅಲ್ಲಾ ಇದು ಅನ್ನುವ ಟಾಂಟ್ ಕೊಡೋ ಸಾಲುಗಳನ್ನು ಕೂಡಾ ಸೇರಿಸಲಾಗಿದೆ.
ಒಂದು ನಿಟ್ಟಿನಲ್ಲಿ ಸುದೀಪ್ ಹೆಸರಿನಲ್ಲಿರುವ ಟ್ರಸ್ಟ್ ಕಡೆಯಿಂದ ಉತ್ತಮ ಕೆಲಸವೊಂದು ನಡೆದಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
ಈ ನಡುವೆ ವೀರಕಪುತ್ರ ಅವರ ಪತ್ರ ವೈರಲ್ ಆದ ಬೆನ್ನಲ್ಲೇ ಕೆಲ ನಟರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಬೆಂಬಲಕ್ಕೆ ಧಾವಿಸಿದ್ದರು, ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಅನ್ನುವುದು ನಮ್ಮ ನಾಯಕನ ನಿಲುವು ಅನ್ನುವ ಪೊಳ್ಳು ವಾದವನ್ನು ಮುಂದಿಟ್ಟಿದ್ದರು. ಆದರೆ ಸ್ಟಾರ್ ಗಳು ಅನ್ನಿಸಿಕೊಂಡವರು ಮಾಡಿದ ಕೆಲಸ ಪ್ರಚಾರ ಪಡೆಯಲೇಬೇಕು. ಸಮಾಜಕ್ಕೆ ಮಾದರಿಯಾಗಿರುವ ಮಂದಿ ಮಾಡಿದ ಕೆಲಸ 10 ಜನರಿಗೆ ಗೊತ್ತಾದರೆ ಮತ್ತೆ 10 ಜನ ಕೈ ಜೋಡಿಸುತ್ತಾರೆ. ಅಗ್ಲೇ ಸ್ಟಾರ್ ಗಳು ಮಾಡಿದ ಸಹಾಯಕ್ಕೊಂದು ಬೆಲೆ.
Discussion about this post