ಕೊಪ್ಪಳ : ಅಕ್ರಮ ಗೋ ಸಾಗಾಟ ಮತ್ತು ಜಾನುವಾರು ಕಳ್ಳತನ ವಿಚಾರದಲ್ಲಿ ಆರೋಪಿಗಳಿಗೆ ಶಿಕ್ಷೆಯುವುದು ಬಲು ಅಪರೂಪ. ಸೂಕ್ತ ಸಾಕ್ಷಿಗಳ ಕೊರತೆಯಿಂದ ಆರೋಪಿಗಳು ಖುಲಾಸೆಯಾಗುತ್ತಾರೆ. ಆದರೆ ಕೊಪ್ಪಳ ಯಲಬುರ್ಗಾ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು ಅನ್ನುವ ನಿಟ್ಟಿನಲ್ಲಿ ಸಲ್ಲಿಸಿದ ಜಾರ್ಜ್ ಶೀಟ್ ಇದೀಗ ಫಲ ನೀಡಿದೆ.
ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಯಲಬುರ್ಗಾದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಇಬ್ಬರು ವ್ಯಕ್ತಿಗಳಿಗೆ ಶನಿವಾರ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿದೆ.
2020ರಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬ್ಯಾಲವಾಡಗಿ ಗ್ರಾಮದ ಸದ್ದಾಂ ಹುಸೇನ ಭಾಷಾಸಾಬ್ ಪೈಲ್ವಾನ ಹಾಗೂ ಮುಂಡರಗಿ ತಾಲ್ಲೂಕಿನ ಪೇಠಾಲೂರು ಗ್ರಾಮದ ಆಶ್ರಯ ಕಾಲೊನಿಯ ಜಿಲಾನಿ ಜಾತಗಾರ ಎಂಬ ಆರೋಪಿಗಳು ಬೂನಕೊಪ್ಪ ಸೀಮಾದಲ್ಲಿರುವ ಹಗೇದಾಳ ಗ್ರಾಮದ ರೈತ ಚಿದಾನಂದಪ್ಪ ಕಮ್ಮಾರ ಅವರ ಜಮೀನಿನಲ್ಲಿರುವ ದನದ ಸೆಡ್ಡಿನಲ್ಲಿದ್ದ 2 ಎತ್ತು, 2 ಆಕಳನ್ನು ಕದ್ದು ದಾವಣಗೆರೆಯ ಅಪರಿಚಿತ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರು.
ಈ ಸಂಬಂಧ ಚಿದಾನಂದ ಅವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಯಲಬುರ್ಗಾ ಪೊಲೀಸರು ಪ್ರಕರಣ ಬೆನ್ನು ಹತ್ತಿದ್ದರು. ಆರೋಪಿಗಳಿಗೆ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿದ್ದ ಪಿ.ಎಸ್.ಐ. ಹನಮಂತಪ್ಪ ತಳವಾರ ಹಾಗೂ ಸಿಪಿಐ ಎಂ.ನಾಗರೆಡ್ಡಿ ಆರೋಪಿಗಳ ಹೆಡೆ ಮುರಿ ಕಟ್ಟಿದ್ದರು.
ಇದೀಗ ವಿಚಾರಣೆ ಮುಗಿಸಿರುವ ನ್ಯಾಯಾಲಯ ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.
Discussion about this post