ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರು ಇದೀಗ ಬಾಕಿ ಹಣ ಕೊಡಿಸಿ ಎಂದು ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ. ದುರಂತ ಅಂದರೆ ರೈತರಿಗೆ ಬಾಕಿ ಉಳಿಸಿಕೊಂಡ ಕಾರ್ಖಾನೆ ಮಾಲೀಕರ ಪೈಕಿ ಬಹುತೇಕರು ಜನಪ್ರತಿನಿಧಿಗಳಾಗಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರೇ ಕೋಟಿ ಕೋಟಿ ಮೊತ್ತವನ್ನು ರೈತರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆ ಪೈಕಿ ಕೆಲವರ ಹೆಸರು ಹೀಗಿದೆ.
ಶಾಸಕ ಆನಂದ್ ನ್ಯಾಮಗೌಡ ಮಾಲೀಕತ್ವದ ಜಮಖಂಡಿ ಶುಗರ್ಸ್ ಕಾರ್ಖಾನೆ 17.46 ಕೋಟಿ ಬಾಕಿ ಉಳಿಸಿಕೊಂಡಿದೆ. ಶಾಮನೂರು ಶಿವಶಂಕರಪ್ಪ ಮಾಲೀಕತ್ವದ ಐಸಿಪಿಎಲ್ ಉತ್ತೂರು ಕಾರ್ಖಾನೆ 18.18 ಕೋಟಿ, ಮಾಜಿ ಸಚಿವ ಎಸ್.ಆರ್ ಪಾಟೀಲ್ ಮಾಲೀಕತ್ವದ ಬೀಳಗಿ ಶುಗರ್ಸ್ ಬಾಡಗಂಡಿ 9.27 ಕೋಟಿ, ರಮೇಶ್ ಜಾರಕಿಹೊಳಿ ಮಾಲೀಕತ್ವದ ಶ್ರೀ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ 20 ಕೋಟಿ, ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾಲೀಕರಾಗಿರುವ ಸತೀಶ ಶುಗರ್ಸ್ 30 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಇವರೆಲ್ಲರೂ ಕಾಂಗ್ರೆಸ್ ನಾಯಕರು ಅನ್ನುವುದು ಗಮನಾರ್ಹ ವಿಷಯ. ರಾಹುಲ್ ಗಾಂಧಿಯೇ ಮಧ್ಯ ಪ್ರವೇಶ ಮಾಡಿ ರೈತರಿಗೆ ಮೊದಲು ಕಾಸು ಪಾವತಿ ಮಾಡಿ ಇದು ಪಕ್ಷದ ಇಮೇಜ್ ಧಕ್ಕೆ ತರುತ್ತದೆ ಎಂದು ಎಚ್ಚರಿಕೆ ಕೊಡಬಹುದಿತ್ತು.
ಇನ್ನು ರೈತ ಪರ ಎಂದು ಪದೇ ಪದೇ ನೆನಪಿಸುವ ಯಡಿಯೂರಪ್ಪ ಬೀಗುವುದು ಬೇಕಾಗಿಲ್ಲ. ಅವರ ಪಕ್ಷದ ನಾಯಕರು ಬಾಕಿ ಶೂರರ ಪಟ್ಟಿಯಲ್ಲಿದ್ದಾರೆ. ಕೃಷ್ಣಾ ಸಕ್ಕರೆ ಕಾರ್ಖಾನೆ ಮಾಲೀಕ ಸಂಸದ ಪ್ರಭಾಕರ ಕೋರೆ ದೊಡ್ಡ ಮೊತ್ತವನ್ನು ರೈತರಿಗೆ ಪಾವತಿಸಬೇಕಾಗಿದೆ. ಮಾಜಿ ಸಚಿವ ಉಮೇಶ್ ಕತ್ತಿ ಮಾಲೀಕರಾಗಿರುವ ವಿಶ್ವನಾಥ ಶುಗರ್ಸ್ ಬೆಲ್ಲದ ಬಾಗೇವಾಡಿ 15 ಕೋಟಿ ಬಾಕಿ ಉಳಿಸಿಕೊಂಡಿದೆ. ಮತ್ತೊಬ್ಬ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಲೀಕರಾಗಿರುವ ಮುಧೋಳ ನಿರಾಣಿ ಸಕ್ಕರೆ ಕಾರ್ಖಾನೆ 28.12 ಕೋಟಿ ಹಾಗೂ ಅವರೇ ಮಾಲೀಕರಾಗಿರುವ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆ ಹಿಪ್ಪರಗಿ 11.09 ಕೋಟಿ ಬಾಕಿ ಇರಿಸಿಕೊಂಡಿದೆ.
ಹಾದಿ ಬೀದಿಯಲ್ಲಿ ಸರ್ಕಾರದ ವಿರುದ್ಧ ಮಾತನಾಡುವ ಯಡಿಯೂರಪ್ಪ ಸಕ್ಕರೆ ಕಾರ್ಖಾನೆಗಳಿಂದ ಸರ್ಕಾರ ಬಾಕಿ ಹಣವನ್ನು ವಸೂಲಿ ಮಾಡಿಕೊಡಲಿ ಅನ್ನುವ ಬದಲು ತನ್ನ ಪಕ್ಷದ ಮುಖಂಡರನ್ನು ಕರೆದು, ರೈತರೊಂದಿಗೆ ಆಟವಾಡಬೇಡಿ ಮೊದಲು ಅವರಿಗೆ ಬಾಕಿ ಹಣ ಪಾವತಿಸಿ ಎಂದು ಹೇಳಲು ಏನು ತೊಂದರೆ. ಒಂದು ವೇಳೆ ಹೀಗೆ ಹೇಳಿದರೆ ಯಡಿಯೂರಪ್ಪ ಅವರನ್ನು ರೈತ ಪರ ಎಂದು ಒಪ್ಪಿಕೊಳ್ಳಬಹುದಿತ್ತು.
ಆದರೆ ಅಂತಹ ಮನಸ್ಥಿತಿ ಯಾವ ರಾಜಕಾರಣಿಗಳಿಗೂ ಇಲ್ಲ, ಯಾಕೆಂದರೆ ಜನರೊಂದಿಗೆ ಆಟವಾಡುವುದೇ ರಾಜಕಾರಣಿಗಳ ಕಾಯಕ. ಕುಮಾರಸ್ವಾಮಿಯವರನ್ನು ವಿರೋಧಿಸಬೇಕು ಅನ್ನುವ ಒಂದೇ ಕಾರಣಕ್ಕೆ ಬಿಜೆಪಿ ಸಕ್ಕರೆ ರಾಜಕೀಯ ಮಾಡುವುದರಲ್ಲಿ ಅರ್ಥವಿಲ್ಲ.
ಯಡಿಯೂರಪ್ಪನವರೇ ಮೊದಲು ನಿಮ್ಮ ಪಕ್ಷದ ನಾಯಕರಿಗೆ ಬಾಕಿಚುಕ್ತಾ ಮಾಡಲು ಹೇಳಿ. ಆಮೇಲೆ ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಿರುದ್ಧ ಮುಗಿ ಬೀಳುವುದರಲ್ಲಿಅರ್ಥವಿದೆ.
Discussion about this post