ಉಡುಪಿ : ದೇಶದಲ್ಲಿ ಆಧಾರ್ ಕಾರ್ಡ್ ಯೋಜನೆ ಜಾರಿಯಾದ ಬಳಿಕ, ಅದನ್ನು ಇರೋ ಬರೋ ಸರ್ಕಾರಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಇನ್ನು ಆಧಾರ್ ಲಿಂಕ್ ಅನ್ನುವುದು ಈ ಜನ್ಮದಲ್ಲಿ ಮುಗಿಯದ ಕೆಲಸವಾಗಿದೆ. ಪಾನ್ ಕಾರ್ಡ್ ಗೆ ಆಧಾರ್ ಲಿಂಕ್, ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್, ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್. ಹೀಗೆ ಊರೋ ಬರೋ ಕಡೆ ಲಿಂಕ್ ಆಗಲೇಬೇಕು ಆಧಾರ್.
ಈ ನಡುವೆ ಇದೀಗ ಕೊಲ್ಲೂರು ಮೂಕಾಂಬಿಕಾ ದೇಗುಲದ ದರ್ಶನಕ್ಕೆ ಬರೋ ಭಕ್ತರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಲೇಬೇಕು. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲ ಅಂದ್ರೆ ದೇವಸ್ಥಾನಕ್ಕೆ ನೋ ಎಂಟ್ರಿ. ಹಾಗಂತ ಕೇವಲ ಆಧಾರ್ ಕಾರ್ಡ್ ತಂದ್ರೆ ಸಾಕೇ, ಮೊಬೈಲ್ ಕೂಡಾ ತಂದಿರಬೇಕು.
ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಿಂದ ಆದೇಶ ಹೊರ ಬಿದ್ದಿದ್ದು, ಕೋವಿಡ್ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಈ ನಿರ್ಧಾರವನ್ನು ಕೈಗೊಂಡಿದೆ. ಕೊಲ್ಲೂರು ದೇವಸ್ಥಾನಕ್ಕೆ ಕೇರಳದಿಂದ ಅತೀ ಹೆಚ್ಚು ಭಕ್ತರು ಆಗಮಿಸುತ್ತಾರೆ. ಕೇರಳದಲ್ಲಿ ಕೊರೋನಾ ಹೇಗೆ ಅಬ್ಬರಿಸುತ್ತಿದೆಯೋ ಅದೇ ರೀತಿ ನಕಲಿ RTPCR ತಯಾರಿಯೂ ಜೋರಾಗಿದೆ. ಈ ಹಿನ್ನಲೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಕೇರಳದಿಂದ ಬರೋ ಭಕ್ತರು 72ಗಂಟೆಯ RTPCR ವರದಿಯನ್ನು ತರಬೇಕು ಅನ್ನುವ ಆದೇಶ ಜಾರಿಯಲ್ಲಿದೆ.
Discussion about this post