ಬೆಂಗಳೂರು : ಲಾಕ್ ಡೌನ್ ಇಲ್ಲ.. ಲಾಕ್ ಡೌನ್ ಇಲ್ಲ ಎಂದು ಹೇಳುತ್ತಿದ್ದ ಸರ್ಕಾರ ಅಳಿಯ ಅಲ್ಲ ಮಗಳ ಗಂಡ ಅನ್ನುವ ನಿಯಮ ಪ್ರಯೋಗಿಸಿ, ಕಠಿಣ ಕ್ರಮ ಅನ್ನುವ ಟೈಟಲ್ ನಲ್ಲಿ ಲಾಕ್ ಡೌನ್ ಆದೇಶ ಹೊರ ಬಿದ್ದಿದೆ.
ಬೆಂಗಳೂರು ಹಾಗೂ ರಾಜ್ಯದ ಕೆಲ ಜಿಲ್ಲೆಗಳ ಪರಿಸ್ಥಿತಿಯನ್ನು ಗಮನಿಸಿದರೆ ಇಂತಹ ಕಠಿಣ ನಿಯಮಗಳು ಅನಿವಾರ್ಯವಾಗಿದೆ. ಕೊರೋನಾ ಸೋಂಕಿನ ಕುರಿತಂತೆ ಜನರಲ್ಲಿ ನಿರ್ಲಕ್ಷ್ಯ ಮುಂದುವರಿದಿರುವ ಹಿನ್ನಲೆಯಲ್ಲಿ ಕಠಿಣ ಕ್ರಮ ಅನಿವಾರ್ಯವಾಗಿತ್ತು. ಆದರೆ ಅದನ್ನು ತರಾತುರಿಯಲ್ಲಿ ನಿರ್ಧರಿಸುವುದಲ್ಲ. ಜನರಿಗೆ ಒಂದಿಷ್ಟು ಉಸಿರಾಡಲು ಅವಕಾಶ ಕೊಟ್ಟು ಈ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಅನ್ನುವ ಕನಿಷ್ಠ ಜ್ಞಾನ ಇಲ್ಲದೇ ಹೋಗಿದ್ದು ಮಾತ್ರ ದುರಂತ.
ಮೊನ್ನೆ ಮೊನ್ನೆ ಮಾತನಾಡಿದ ಸಚಿವ ಅಶೋಕ್ ನೋ ಲಾಕ್ ಡೌನ್… ನೋ ಲಾಕ್ ಡೌನ್.. ನೋ ಲಾಕ್ ಡೌನ್ ಎಂದು ಸಿನಿಮಾ ಶೈಲಿಯಲ್ಲಿ ಡೈಲಾಗ್ ಹೊಡೆದಿದ್ದರು. ಆದರೆ ಇಂದು ರಾಜ್ಯ ಸರ್ಕಾರ ಅಧಿಕೃತವಾಗಿ 14 ದಿನಗಳ ಲಾಕ್ ಡೌನ್ ಆದೇಶ ಹೊರಡಿಸಿದೆ.
ಇನ್ನು ಆದೇಶ ಹೊರ ಬೀಳುವ ಮುನ್ನ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಈ ವೇಳೆ ಸಭೆಯಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಲಾಕ್ ಡೌನ್ ಬೇಡ ಇದರಿಂದ ಕಾರ್ಮಿಕರಿಗೆ ಸಿಕ್ಕಾಪಟ್ಟೆ ತೊಂದರೆಯಾಗುತ್ತದೆ. ದಯವಿಟ್ಟು ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸೋಣ ಅಂದಿದ್ದಾರಂತೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮತ್ತೊಬ್ಬ ಸಚಿವ ಎಂಟಿಬಿ ನಾಗರಾಜ್, ಈಗಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗೆಲ್ಲಾ ಸಾಫ್ಟ್ ಆಗಿ ಹೇಳಿದ್ರೆ ಜನರನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ನನ್ನ ಸಂಬಳ, ಸೌಲಭ್ಯ ಎಲ್ಲಾ ತಗೊಳ್ಳಿ, ಮೊದಲು ಬೆಡ್, ಆಕ್ಸಿಜನ್, ಐಸಿಯು ವ್ಯವಸ್ಥೆ ಮಾಡಿ. ಒಂದಿಷ್ಟು ದಿನ ಲಾಕ್ ಡೌನ್ ಮಾಡಿದ್ರೆ ಸೋಂಕು ನಿಯಂತ್ರಣಕ್ಕೆ ಬರಬಹುದು ಅಂದಿದ್ದಾರೆ.
ನಾಗರಾಜ್ ವಾದಕ್ಕೆ ಬಹುತೇಕ ಸಚಿವರು ಬೆಂಬಲ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕೊನೆಗೆ ಮುಖ್ಯಮಂತ್ರಿ ಲಾಕ್ ಡೌನ್ ನಿರ್ಧಾರ ಕೈಗೊಂಡಿದ್ದಾರೆ.
Discussion about this post