ಬೆಂಗಳೂರು : ದಕ್ಷಿಣ ಭಾರತದ ಅದ್ಯಾವುದೇ ರಾಜ್ಯಗಳಿಗೆ ಉತ್ತರದಿಂದ ರಾಜ್ಯಪಾಲರಾಗಿ ಬಂದವರಿಗೆ ಭಾಷೆಯ ಸಮಸ್ಯೆ ಕಾಡುತ್ತಿರುತ್ತದೆ. ಹಾಗೇ ರಾಜ್ಯಪಾಲರಾಗಿ ಬಂದವರು ಸ್ಥಳೀಯ ಭಾಷೆಯನ್ನು ಕಲಿಯುವ ಪ್ರಯತ್ನ ಮಾಡುವುದು ಅಪರೂಪ. ಒಂದೆರೆಡು ಪದ ಕಲಿತು ಭಾಷಣ ಮಾಡಿ ಸುಮ್ಮನಾಗುತ್ತಾರೆ. ಆದರೆ ಈ ಹಿಂದೆ ರಾಜ್ಯಪಾಲರಾಗಿದ್ದ ವಾಲಾ ಕನ್ನಡವನ್ನು ಕಡೆಗಣಿಸಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು.
ಈ ನಡುವೆ ಈಗ ರಾಜ್ಯಪಾಲರಾಗಿರುವ ಮಧ್ಯಪ್ರದೇಶ ಮೂಲದ ಥಾವರ್ ಚಂದ್ ಗೆಹ್ಲೋಟ್ ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆಯುವ ಹೊತ್ತಿಗೆ ಕನ್ನಡ ಕಲಿಕೆ ಪ್ರಾರಂಭಿಸಿದ್ದಾರೆ. ಜ್ಞಾನಮೂರ್ತಿ ಅನ್ನುವವರನ್ನು ರಾಜ್ಯಪಾಲರ ಶಿಕ್ಷಕರಾಗಿ ನೇಮಿಸಲಾಗಿದ್ದು, ರಾಜ್ಯಪಾಲರಿಗೆ ಕನ್ನಡ ಪುಸ್ತಕ ನೀಡುವ ಮೂಲಕ ಕಲಿಕೆ ಪ್ರಾರಂಭಿಸಿದ್ದಾರೆ.
ಪ್ರತೀ ನಿತ್ಯ 1 ಗಂಟೆಗಳ ಕಾಲ ಕನ್ನಡ ಪಾಠ ನಡೆಯಲಿದ್ದು, ಮೊದಲ ದಿನ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಇತಿಹಾಸದ ಬಗ್ಗೆ ರಾಜ್ಯಪಾಲರಿಗೆ ಪಾಠ ಮಾಡಲಾಗಿದ್ದು, ಕನ್ನಡ ವರ್ಣಮಾಲೆ ಅಭ್ಯಾಸ ಪ್ರಾರಂಭವಾಗಿದೆ. ಗೆಹ್ಲೋಟ್ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಕನ್ನಡಿಗರನ್ನು ನಾನೆಷ್ಟು ಗೌರವಿಸುತ್ತೇನೆ ಅನ್ನುವುದನ್ನು ಸೂಚಿಸಿದ್ದರು.
ರಾಜ್ಯಪಾಲರ ಈ ನಡೆ ಕನ್ನಡಿಗರನ್ನು ಪುಳಕಗೊಳಿಸಿದ್ದು, ಅಭಿನಂದನೆಗಳ ಮಹಾಪೂರ ಹರಿದು ಬರಲಾರಂಭಿಸಿದೆ.
Discussion about this post