ಬೆಂಗಳೂರು : ಲಸಿಕೆ ನೀಡುವ ಕೆಲಸಕ್ಕೆ ವೇಗ ನೀಡದಿದ್ದರೆ, ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಮತ್ತಷ್ಟು ಏರುವುದರಲ್ಲಿ ಸಂಶಯವಿಲ್ಲ.
ಈಗಾಗಲೇ ಮೊದಲ ಹಂತದಲ್ಲಿ ಲಸಿಕೆ ಪಡೆದವರು ಮಾತ್ರ ಕೊರೋನಾ ಸೋಂಕು ಎದುರಿಸುವ ತಾಕತ್ತು ಪಡೆದುಕೊಂಡಿದ್ದಾರೆ.
ಎರಡನೇ ಹಂತದ ಲಸಿಕೆ ವಿತರಣೆ ಈಗಷ್ಟೇ ಪ್ರಾರಂಭಗೊಂಡಿದ್ದು, ಮೊದಲ ಡೋಸ್ ಹಂಚಿಕೆ ಕಾರ್ಯವೇ ಮುಗಿದಿಲ್ಲ.
ಪ್ರಸ್ತುತ 15 ಲಕ್ಷ ಜನರಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಇಷ್ಟು ಹೊತ್ತಿಗೆ 50 ಲಕ್ಷ ಜನರಿಗೆ ಲಸಿಕೆ ಹಂಚಿಕೆ ಕಾರ್ಯ ಮುಕ್ತಾಯವಾಗಬೇಕಾಗಿತ್ತು.
ಅಷ್ಟು ಹೊತ್ತಿಗಾಗಲೇ ಕೊರೋನಾ ಮತ್ತೆ ಅಬ್ಬರಿಸತೊಡಗಿದೆ. ಇಂದು ನಾಳೆಯೊಳಗಡೆ ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟೋದು ಖಚಿತ ಎನ್ನಲಾಗಿದೆ.
ರಾಜ್ಯ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವೇ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಸೋಂಕಿನ ಅಬ್ಬರ ಹೆಚ್ಚಿದ ಸಂದರ್ಭದಲ್ಲಿ ನಮ್ಮ ಆರೋಗ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿತ್ತು. ಬಸ್ ಸಂಚಾರ ತಡೆ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಂಡಿರಲಿಲ್ಲ.
ಕೇರಳದಿಂದ ಬರುವವರಿಗೆ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯ ಅನ್ನುವ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಿತ್ತು.
ಇನ್ನು ಕೊರೋನಾ ಸೋಂಕಿನ ಎರಡನೇ ಅಲೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದು ಚಿತ್ರಮಂದಿರಗಳು. ಶೇ 50ರಷ್ಟು ಚಿತ್ರಮಂದಿರ ತೆರೆಯಿರಿ ಅಂದ್ರೆ ನಮ್ಮವರು ಶೇ 100ರಷ್ಟು ಸೀಟ್ ಗಳನ್ನು ಭರ್ತಿ ಮಾಡಿದ್ರು. ಹೋಗ್ಲಿ ಮಾಸ್ಕ್, ಸಾಮಾಜಿಕ ಅಂತರವಿತ್ತಾ, ಆ ಬಗ್ಗೆಯೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿರಲಿಲ್ಲ.
ಇದೀಗ ಎಲ್ಲವೂ ಕೈ ಮೀರಿ ಹೋಗುವ ಲಕ್ಷಣ ಕಾಣಿಸುತ್ತಿದೆ. ಆದರೆ ಪ್ರಾರಂಭವಾಗಿರುವ ಶಾಲಾ ಕಾಲೇಜುಗಳನ್ನು ಸ್ಥಗಿತಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ.
ಈ ಬಗ್ಗೆ ಸಚಿವ ಸುಧಾಕರ್ ಅವರನ್ನು ಕೇಳಿದ್ರೆ, ಎಚ್ಚೆತ್ತುಕೊಳ್ಳುವಂತೆ ಜನರಿಗೆ ಅವಕಾಶ ನೀಡಲಾಗಿದೆ ಅಂದಿದ್ದಾರೆ.
ರಾಜ್ಯ ಸರ್ಕಾರವನ್ನು ನಂಬಿ ಕೂರುವ ಬದಲು ನಮ್ಮ ಮಕ್ಕಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಗ್ಗೆ ಜಾಗೃತಿ ಮೂಡಿಸುವುದು ಉತ್ತಮವಲ್ಲವೇ.
Discussion about this post