ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆಗೆ ಸಿದ್ದತೆಗಳು ನಡೆದಿದೆ. ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯರು ಅನ್ ಲಾಕ್ ಪ್ರಕ್ರಿಯೆ ಪ್ರಾರಂಭಿಸಲು ಹಸಿರು ನಿಶಾನೆ ತೋರಿರುವ ಹಿನ್ನಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಜೂನ್ 14 ರಿಂದ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ ತರಲು ನಿರ್ಧರಿಸಲಾಗಿದೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಸೋಂಕಿನ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಯಲಿದೆ.
ಈ ನಡುವೆ ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಅಂತರ್ ಜಿಲ್ಲಾ ಓಡಾಟಕ್ಕೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಸ್ವಂತ ವಾಹನದಲ್ಲಿ ಹಗಲು ಹೊತ್ತಿನಲ್ಲಿ ಅಂತರ್ ಜಿಲ್ಲಾ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಕೊರೋನಾ ಹೆಚ್ಚಿರುವ ಜಿಲ್ಲೆಗಳಿಂದಲೂ ಜನ ಬೆಂಗಳೂರಿಗೆ ದೌಡಾಯಿಸಲಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಮತ್ತೆ ಕೊರೋನಾ ಹೆಚ್ಚಾಗುವ ಆತಂಕ ಎದುರಾಗಿದೆ. ಹಳ್ಳಿಗಳಿಂದ ಸಿಟಿಗೆ ಕೊರೋನಾ ಸೋಂಕು ಹೋದರೂ ಅಚ್ಚರಿ ಇಲ್ಲ.
ಇನ್ನು ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಆದೇಶವನ್ನು ಮುಖ್ಯಮಂತ್ರಿಗಳು ಹೊರಡಿಸಿದ್ದಾರೆ. ಇದೊಂದು ಆದೇಶ ಈಗ ಸಿಕ್ಕಾಪಟ್ಟೆ ಗೊಂದಲ ಮೂಡಿಸಿದೆ. ಶನಿವಾರ ಮತ್ತು ಭಾನುವಾರ ಅಗತ್ಯ ವಸ್ತುಗಳನ್ನು ತೆರೆಯಲು ಅನುಮತಿಯೇ ಇದೆಯೇ ಅನ್ನುವುದು ಇನ್ನೂ ಗೊತ್ತಾಗಿಲ್ಲ. ಜೊತೆಗೆ ಮಾಂಸ ಸೇರಿದಂತೆ ವಾರಾಂತ್ಯಕ್ಕೆ ಅಗತ್ಯವಾದ ಅಂಗಡಿಗಳನ್ನು ತೆರೆಯಬಹುದೇ ಅನ್ನುವ ಬಗ್ಗೆ ಏನೂ ಹೇಳಿಲ್ಲ.
ಇನ್ನು ಲಾಕ್ ಡೌನ್ ಜಾರಿಯಲ್ಲಿರುವ ಜಿಲ್ಲೆಗಳಲ್ಲೂ ವಾರಾಂತ್ಯದ ಕರ್ಫ್ಯೂ ಘೋಷಿಸಲಾಗಿದೆ. ಈಗಾಗಲೇ ಈ 11 ಜಿಲ್ಲೆಗಳಲ್ಲಿ ಬೆಳಗ್ಗೆ 6 ರಿಂದ 10 ರ ತನಕ ಬಹುತೇಕ ಚಟುವಟಿಕೆಗಳು ನಡೆಯುತ್ತಿದೆ. ವೀಕೆಂಡ್ ಕರ್ಫ್ಯೂ ಜಾರಿಯಾದರೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಅಂಗಡಿ, ಮಟನ್ ಚಿಕನ್ ಶಾಪ್, ಮದ್ಯದಂಗಡಿ ತೆರೆಯಬಹುದೇ ಅನ್ನುವ ಬಗ್ಗೆಯೂ ಹೇಳಿಲ್ಲ.
ಹೇಳಿ ಕೇಳಿ ಯಡಿಯೂರಪ್ಪ ಅವರ ಆದೇಶಗಳು ಸದಾ ಗೊಂದಲದಿಂದ ಕೂಡಿರುತ್ತದೆ. ಮೊದಲು ಲಾಕ್ ಡೌನ್ ಜಾರಿ ಮಾಡಿದಾಗ್ಲೂ ಹೀಗೆ ಯಡವಟ್ಟಿನ ಆದೇಶ ಕೊಟ್ಟಿದ್ದರು. ಇಂದು ಕೂಡಾ ಅದೇ ಮುಂದುವರಿದಿದೆ.
Discussion about this post