ಬೆಂಗಳೂರು : ನಟ ಸಂಚಾರಿ ವಿಜಯ್ ಮೆದುಳು ಡೆಡ್ ಆಗಿರುವುದನ್ನು ಅಪೋಲೋ ಆಸ್ಪತ್ರೆ ವೈದ್ಯರು ಅಂಗಾಂಗ ದಾನ ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ. ಇದೀಗ ಓಟಿಯಲ್ಲಿ ಅಂಗಾಂಗ ತೆಗೆಯುವ ಪ್ರಕ್ರಿಯೆಗಳು ಚಾಲನೆಯಲ್ಲಿದೆ.
ಈ ನಡುವೆ ವಿಜಯ್ ಅಕಾಲಿಗ ನಿಧನದಿಂದ ಕನ್ನಡನಾಡು ನೋವಿನಲ್ಲಿದೆ. ಚಂದನವನ ಶಾಕ್ ನಲ್ಲಿದೆ. ಚಂದನವನದಲ್ಲಿ ಆವಕಾಶಕ್ಕಾಗಿ ಕಾಯುತ್ತಿದ್ದ ಸಂಚಾರಿ ವಿಜಯ್ ಪಡಬಾರದ ಪಾಡು ಪಟ್ಟಿದ್ದರು. ಆದರೆ ಅವರ ಕೊನೆಯ ದಿನಗಳಲ್ಲಿ ಅವರಿಗೆ ಭರ್ಜರಿ ಅವಕಾಶಗಳು ಸಿಕ್ಕಿತ್ತು. ವಿಧಿಯಾಟ ಅನ್ನುವಂತೆ ಸಾಲು ಸಾಲು ಚಿತ್ರಗಳು ಅವರನ್ನು ಹುಡುಕಿಕೊಂಡು ಬಂದಿದ್ದವು.
ನಿರ್ದೇಶಕ ಕೃಪಾಕರ್ ನಿರ್ದೇಶನ ಮಾಡಿರುವ ತಲೆದಂಡ ಚಿತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದರು. ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಈ ವರ್ಷ ಬಿಡುಗಡೆಯಾಗಬೇಕಿತ್ತು. ಕೊರೋನಾ ಕಾರಣದಿಂದ ಮುಂದಕ್ಕೆ ಹೋಗಿತ್ತು.
ಮೇಲೊಬ್ಬ ಮಾಯಾವಿ ಸಂಚಾರಿ ವಿಜಯ್ ಅಭಿನಯಿಸಿರುವ ಮತ್ತೊಂದು ಸಿನಿಮಾ. ಈ ಚಿತ್ರಕ್ಕೆ ಸಂಚಾರಿ ವಿಜಯ್ ಡಬ್ಬಿಂಗ್ ಮುಗಿಸಿದ್ದು ಬಿಡುಗಡೆಗೆ ಸಿದ್ದವಾಗಿದೆ. ಪತ್ರಕರ್ತನವೀನ್ ಕೃಷ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು ಚಕ್ರವರ್ತಿ ಚಂದ್ರಚೂಡ್ ಅವರ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ.
ಪುಕ್ಸಟ್ಟೆ ಲೈಫು ಸಂಚಾರಿ ವಿಜಯ್ ಮುಗಿಸಿರುವ ಮತ್ತೊಂದು ಸಿನಿಮಾ. ಅಚ್ಚುತ್ ಕುಮಾರ್, ರಂಗಾಯಣ ರಘು ನಟನೆಯ ಸಿನಿಮಾವನ್ನು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡಿದ್ದಾರೆ.
ಲೂಸ್ ಮಾದ ಯೋಗಿ ಪ್ರಧಾನ ಪಾತ್ರದಲ್ಲಿರುವ ಲಂಕೆ ಸಿನಿಮಾ ಒಪ್ಪಿಕೊಂಡಿದ್ದ ಸಂಚಾರಿ ವಿಜಯ್ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವುದರಲ್ಲಿದ್ದರು. ಈ ಸಿನಿಮಾವನ್ನ ಎಂ.ಡಿ ರಾಮು ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ಜನಾರ್ಧನ್ ಪಿ ಜಾನಿ ನಿರ್ದೇಶನದಲ್ಲಿ ತಯಾರಾಗುತ್ತಿದ್ದ ‘ಪಿರಂಗಿಪುರ’ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ಬಿಡುಗಡೆಯಾಗಲಿದೆ. 25 ಕೋಟಿ ಬಜೆಟ್ ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಮೈಲಿಗಲ್ಲು ಅನ್ನಿಸಿಕೊಳ್ಳಲಿದ್ದ ಪಾತ್ರವೊಂದರಲ್ಲಿ ನಟಿಸಬೇಕಾಗಿತ್ತು. ಕಳೆದ ನಾಲ್ಕು ವರ್ಷದಿಂದ ಈ ಪ್ರಾಜೆಕ್ಟ್ ಟೇಕಾಫ್ ಆಗಿರಲಿಲ್ಲ
ಅವಸ್ಥಾಂತರ ಸಂಚಾರಿ ವಿಜಯ್ ಒಪ್ಪಿಕೊಂಡಿದ್ದ ಮತ್ತೊಂದು ಸಿನಿಮಾ ಜಿ ದೀಪಕ್ ಕುಮಾರ್ ನಿರ್ದೇಶನದಲ್ಲಿ ರಂಜನಿ ರಾಘವನ್, ದಿಶಾ ಕೃಷ್ಣಯ್ಯ ನಾಯಕಿಯಾಗಿದ್ದರು. ಅವಸ್ಥಾಂತರ’ ಚಿತ್ರದ ಶೂಟಿಂಗ್ ಕೆಲ ದಿನಗಳ ಕಾಲ ನಡೆದಿತ್ತು.
ಇಷ್ಟೇ ಅಲ್ಲದೆ ಹಲವು ಸಿನಿಮಾಗಳ ಕಥೆಯನ್ನು ಕೇಳಿದ್ದ ಸಂಚಾರಿ ವಿಜಯ್ ಲಾಕ್ ಡೌನ್ ತೆರವುಗೊಂಡ ಬೆನ್ನಲ್ಲೇ ಸಹಿ ಹಾಕಬೇಕಾಗಿತ್ತು. ಆದರೆ ಅಷ್ಟು ಹೊತ್ತಿಗೆ ಅವರು ಈ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ.
Discussion about this post