ಜೆಡಿಎಸ್ ಪಕ್ಷ ಕಷ್ಟದಲ್ಲಿದ್ದು, ದಯಮಾಡಿ ಪಕ್ಷವನ್ನ ಉಳಿಸಿಕೊಡಿ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಕೆಆರ್ ಪೇಟೆ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪರ ಮಾಕವಳ್ಳಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು ನಾನು ರಾಜಕೀಯ ಷಡ್ಯಂತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸೋತಿರಬಹುದು. ಹಾಗಂತ ಜನರು ನನಗೆ ಮೋಸ ಮಾಡಿಲ್ಲ. ನನ್ನ ಮನಸ್ಸಿನಲ್ಲಿ ಸೋಲಿನ ನೋವಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕೆಲವರು ಬೆನ್ನಿಗೆ ಚೂರಿ ಹಾಕಿ ಹೋದರು. ನಾರಾಯಣಗೌಡ ಕೂಡ ಆಮಿಷಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಪಾಠ ಕಲಿತಿರುವುದಾಗಿ ಹೇಳಿದ ನಿಖಿಲ್ ಆ ವೇಳೆ ದೊಡ್ಡ ಮಟ್ಟದ ಅನುಭವ ಪಡೆದಿದ್ದೇನೆ. ರಾಜಕೀಯದ ಮೊದಲ ಹೆಜ್ಜೆಯಲ್ಲೇ ದೊಡ್ಡ ಅನುಭವವಾಗಿದೆ. ನನ್ನ ಸೋಲಿಗೆ ರಾಜಕೀಯ ಷಡ್ಯಂತ್ರವೇ ಕಾರಣವಾಗಿದೆ ಎಂದು ದೂರಿದರು.
ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಪರ ಪ್ರಚಾರ ನಡೆಸುವುದಾಗಿ ಘೋಷಿಸಿದ ನಿಖಿಲ್, ಈ ಸಂಬಂಧ ಶರತ್ ಜೊತೆ ಮಾತನಾಡಿದ್ದು ಅವರು ಕೂಡಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಹೀಗಾಗಿ ಅವರು ಹೇಳಿದ ದಿನದಂದು ಹೊಸಕೋಟೆಯಲ್ಲಿ ಶರತ್ ಪರ ಪ್ರಚಾರ ಮಾಡ್ತೀನಿ ಎಂದು ನಿಖಿಲ್ ಹೇಳಿದರು.
Discussion about this post