ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ನವವೃಂದಾವನದಲ್ಲಿರುವ ವ್ಯಾಸರಾಯರ ವೃಂದಾವನ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಅಂತರಾಜ್ಯ ನಿಧಿಗಳ್ಳರ ತಂಡವನ್ನು ಪೋಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತಾಡಪತ್ರಿಯ ನಿವಾಸಿಗಳಾದ ಪೊಲ್ಲಾರಿ ಮುರಳಿ ಮನೋಹರ ರೆಡ್ಡಿ, ಡಿ. ಮನೋಹರ್, ಕೆ. ಕುಮ್ಮಟ ಕೇಶವ, ಬಿ. ವಿಜಯಕುಮಾರ್ ಹಾಗೂ ಟಿ.ಬಾಲನರಸಯ್ಯ ಎಂದು ಗುರುತಿಸಲಾಗಿದೆ. ಇವರಲ್ಲಿ ಮನೋಹರ್ ಹಾಗೂ ವಿಜಯಕುಮಾರ್ ವಾಹನ ಚಾಲಕರಾದರೆ ಕೇಶವ ಬೈಕ್ ಮೆಕ್ಯಾನಿಕ್, ಮುರಳಿ ರೈತನಾಗಿಯೂ, ಬಾಲನರಸಯ್ಯ ಪುರೋಹಿತನಾಗಿದ್ದಾನೆ.
ಬಂಧಿತರಿಂದ ವೃಂದಾವನ ದ್ವಂಸಕ್ಕೆ ಬಳಸಲಾಗಿದ್ದ ಹಾರೆ, ಕಬ್ಬಿಣದ ಚಾಣ, ಸಲಾಕೆ, ಪಿಕಾಸಿ, ಸುತ್ತಿಗೆ, ಮತ್ತು ಆಂಧ್ರ ಪ್ರದೇಶ ನೋಂದಣಿ ಸಂಖ್ಯೆ ಹೊಂದಿರುವ ಇನ್ನೋವ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.
ನಿಧಿ ಮತ್ತು ಅಪಾರ ಸಂಪತ್ತಿನ ಆಸೆಗಾಗಿ ಯತಿಗಳ ವೃಂದಾವನ ದ್ವಂಸ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿರುವುದಾಗಿ ಪೋಲೀಸರು ಹೇಳಿದ್ದಾರೆ.
ಜುಲೈ 17ರ ರಾತ್ರಿ ಆನೆಗುಂದಿ ನವವೃಂದಾವನ ನಡುಗಡ್ಡೆಯಲ್ಲಿರುವ ವ್ಯಾಸರಾಯ ಯತಿಗಳ ವೃಂದಾವನವನ್ನು ನಿಧಿಯಾಸೆಯಿಂದ ದುಷ್ಕರ್ಮಿಗಳು ನಾಶಮಾಡಿದ್ದು ರಾಜ್ಯಾದ್ಯಂತದ ಭಕ್ತ ಸಮೂಹಕ್ಕೆ ಆಘಾತವನ್ನು ತಂದಿತ್ತು.
ಬಂಧಿತರು ಅಂತರಾಜ್ಯ ನಿಧಿ ಕಳ್ಳರೆಂದು ತಿಳಿದುಬಂದಿದ್ದು ತಲೆ ತಪ್ಪಿಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗೆ ಶೋಧ ಕಾರ್ಯ ನಡೆದಿದೆ.
Discussion about this post