ಮಂಗಳೂರು : ಈ ವರೆಗೆ ಕೇರಳದಲ್ಲಿ ನಡೆಯುತ್ತಿದ್ದ ಅಮಾನವೀಯ ಘಟನೆ ಮಂಗಳೂರಿನಲ್ಲೂ ನಡೆದಿದೆ. ಕೇರಳದ ಕಿರಾತಕರನ್ನು ಮೀರಿಸುವ ರೀತಿಯಲ್ಲಿ ಮಂಗಳೂರಿನ ಈ ಮಂದಿ ರಾಕ್ಷಸಿ ಕೃತ್ಯ ಮೆರೆದಿದ್ದಾರೆ. ಅಂದ ಹಾಗೇ ಈ ಅಮಾನವೀಯ ಘಟನೆಗೆ ಸಾಕ್ಷಿಯಾಗಿದ್ದು ಮಂಗಳೂರಿನ ಸುರತ್ಕಲ್.
ನಾಯಿಯೊಂದನ್ನು ಚಲಿಸುತ್ತಿರುವ ಬೈಕ್ ನ ಹಿಂಬದಿಗೆ ಹಗ್ಗದಲ್ಲಿ ಕಟ್ಟಿದ್ದ ದುಷ್ಕರ್ಮಿಗಳು ಅದನ್ನು ದರ ದರನೇ ಎಳೆದುಕೊಂಡು ಹೋಗಿದ್ದಾರೆ.
ನಗರದ ಹೊರವಲಯದ ಸುರತ್ಕಲ್ ಬಳಿಯ ಎನ್ಐಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಇಬ್ಬರು ಬೈಕ್ ಸವಾರರ ಕೃತ್ಯವನ್ನು ಬೇರೆ ವಾಹನ ಸವಾರರು ಸೆರೆ ಹಿಡಿದಿದ್ದಾರೆ. ಈ ವೇಳೆ ಸರ್ವಿಸ್ ರಸ್ತೆಯಲ್ಲಿ ದುಷ್ಕರ್ಮಿಗಳು ಚಲಿಸುತ್ತಿದ್ದರು. ವಿಡಿಯೋ ಮಾಡುತ್ತಿದ್ದವರು ಮುಖ್ಯರಸ್ತೆಯಲ್ಲಿದ್ದರು. ಈ ವೇಳೆ ಸೇತುವೆ ಬಂದ ಕಾರಣ ಸರ್ವೀಸ್ ರಸ್ತೆಯಲ್ಲಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಇದಾದ ಬಳಿಕ ವಿಡಿಯೋ ಮಾಡಿದ ಮಂದಿ ಅನಿಮಲ್ ಕೇರ್ ಟ್ರಸ್ಟ್ ಜೊತೆ ವಿಡಿಯೋ ಹಂಚಿಕೊಂಡಿದ್ದಾರೆ.
ಏಪ್ರಿಲ್ 15 ರಂದು ನಡೆದ ಘಟನೆ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುರತ್ಕಲ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಂಕಿತನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಕೇರಳದಲ್ಲಿ ಇದೇ ರೀತಿಯ ಕೃತ್ಯಗಳು ಹಲವು ಸಲ ನಡೆದಿತ್ತು. ಗರ್ಭಿಣಿ ಆನೆಯನ್ನು ಇದೇ ಕೇರಳದಲ್ಲಿ ಹೇಗೆ ಸಾಯಿಸಿದ್ದರು ಅನ್ನುವುದು ದೇಶಕ್ಕೆ ಗೊತ್ತಿದೆ.
ಕಳೆದ ವರ್ಷದ ಜೂನ್ ನಲ್ಲಿ ತ್ರಿಶೂರ್ ಜಿಲ್ಲೆಯ ಒಲ್ಲೂರು ಪ್ರದೇಶದ ಬೀದಿಯಲ್ಲಿ ದುಷ್ಕರ್ಮಿಗಳು ನಾಯಿ ಬಾಯಿಗೆ ಗಮ್ ಟೇಪ್ ಸುತ್ತಿ ಬಿಟ್ಟು ಹೋಗಿದ್ದರು. 2020ರ ಡಿಸೆಂಬರ್ ನಲ್ಲಿ ಏರ್ನಾಕುಲಂ ನಲ್ಲಿ 62 ವರ್ಷದ ವೃದ್ಧನೊಬ್ಬ ತನ್ನ ಕಾರಿಗೆ ನಾಯಿಯನ್ನು ಕಟ್ಟಿ ಎಳೆದುಕೊಂಡು ಹೋಗಿದ್ದ ಕರ್ಮಕ್ಕೆ ಜೈಲು ಸೇರಿದ್ದ.
ಇನ್ನು ಕೆಲ ದಿನಗಳ ಹಿಂದಷ್ಟೇ ಬೈಕ್ ಹಿಂಬದಿಗೆ ನಾಯಿಯನ್ನು ಹಗ್ಗದಿಂದ ಕಟ್ಟಿ ಹಾಕಿದ್ದ ದುಷ್ಕರ್ಮಿಗಳು ರಸ್ತೆ ಪೂರ್ತಿ ಎಳೆದುಕೊಂಡು ಹೋಗಿದ್ದರು. ಇದೀಗ ಇಂತಹುದೇ ಘಟನೆ ಮಂಗಳೂರಿನಲ್ಲಿ ನಡೆದಿದೆ
Discussion about this post