ಪುತ್ತೂರು : ಡಾ.ಎಂ. ಗಂಗಾಧರ ನಾಯಕ್, ಗೇರು ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಚಿರಪರಿಚಿತ ಹೆಸರು. ಹೌದು ಪುತ್ತೂರಿನಲ್ಲಿರುವ ಎ.ಆರ್.ಎಸ್ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಗಂಗಾಧರ ನಾಯಕ್, ಗೇರು ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡವರಿಗೆ, ಗೇರು ಕೃಷಿಯಲ್ಲಿ ಸಾಧನೆ ಮಾಡಲು ಹೊರಟವರಿಗೆ ಬೆನ್ನೆಲುಬಾಗಿ ನಿಂತಿರುವ ವಿಜ್ಞಾನಿ.
ಇದೇ ಗಂಗಾಧರ್ ನಾಯಕ್ ತಮ್ಮ ಸುದೀರ್ಘ 32 ವರ್ಷಗಳ ಸೇವೆಯಿಂದ ಇಂದು ನಿವೃತ್ತಿಯಾಗುತ್ತಿದ್ದಾರೆ. ಈ ವೇಳೆ ಗಂಗಾಧರ್ ನಾಯಕ್ ಸಾಗಿ ಬಂದ ಹಾದಿ, ಮಾಡಿದ ಸಾಧನೆ ಸಂಶೋಧನೆ, ಎದುರಿಸಿದ ಸವಾಲುಗಳ ನೋಟ ಇಲ್ಲಿದೆ.
ಡಾ.ನಾಯಕ್ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮುಂಡಕೊಚ್ಚಿ ದಿ. ವಿಠಲ ನಾಯಕ್ ಹಾಗೂ ದಿ. ಕುಮುದಮ್ಮ ರವರ ದ್ವಿತೀಯ ಪುತ್ರರಾಗಿದ್ದು ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೀತಾರಾಘವ ಹೈಸ್ಕೂಲ್ ಪೆರ್ನಾಜೆ, ಕೊಂಬೆಟ್ಟು ಸರಕಾರಿ ಕಿರಿಯ ಕಾಲೇಜು ಪುತ್ತೂರಿನಲ್ಲಿ ಶಿಕ್ಷಣ ಮುಗಿಸಿದವರು ಬಿಎಸ್ಸಿಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೆಬ್ಬಾಳ ಸೇರಿಕೊಂಡರು.ಬಳಿಕ ಬಳಿಕ ಕೊಯಂಬತ್ತೂರಿನಲ್ಲಿರುವ ತಮಿಳ್ನಾಡು ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ಎಂ.ಎಸ್ಸಿ, ಕೃಷಿ ಪಿಹೆಚ್ ಡಿ ವ್ಯಾಸಂಗವನ್ನು ಪೂರೈಸಿದ್ದಾರೆ.
ಇದಾದ ಬಳಿಕ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಂಗಳೂರು ಕೃಷಿ ವಿಸ್ತಾರಣಾ ಘಟಕದ ಆಧೀನದಲ್ಲಿದ್ದ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ಒಂದು ವರ್ಷ ಕೃಷಿ ವಿಸ್ತರಣಾ ಮಾರ್ಗದರ್ಶಿಯಾಗಿ, ಇನ್ನೆರಡು ವರ್ಷ ಕೇರಳದ ವಯನಾಡು ಜಿಲ್ಲೆಯ ಪುಲ್ಪಳ್ಳಿಯಲ್ಲಿ ಕಾಫಿ ಮಂಡಳಿಯ ಕಿರಿಯ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಗಂಗಾಧರ್ ನಾಯಕ್ ಬಳಿಕ ದ ಪುತ್ತೂರಿನ ಐ.ಸಿ.ಆರ್ – ಗೇರು ಸಂಶೋಧನಾ ನಿರ್ದೇಶನಾಲಯ ಸೇರಿದರು. ಇಲ್ಲಿ ಕಿರಿಯ, ಹಿರಿಯ, ಪ್ರಧಾನ ವಿಜ್ಞಾನಿಯಾಗಿ ಹಾಗೂ ಸಂಸ್ಠೆಯ ಪ್ರಭಾರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದ್ದು.
ಪುತ್ತೂರಿನಲ್ಲಿರುವ ನಿರ್ದೇಶನಾಲಯದ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಮಹತ್ವದಾಗಿದ್ದು, ರೈತರನ್ನು ಸಂಸ್ಥೆಗೆ ಆಕರ್ಷಿಸುವಲ್ಲಿ ಮತ್ತು ಅವರ ಅವಶ್ಯಕತೆಗಳಿಗೆ ಸ್ಪಂದಿಸುವಲ್ಲಿ ಇವರ ಸೇವೆ ಅವಿಸ್ಮರಣೀಯ.
ಗೇರಿನ ಕುಬ್ಜ ತಳಿ (ನೇತ್ರ ವಾಮನ್) ಹಾಗೂ ಹೆಚ್-೧೩೦ (ದೊಡ್ಡ ಗಾತ್ರದ ಮತ್ತು ಗೊಂಚಲು ಗೊಂಚಲಾಗಿ ಬೆಳೆದು ಅಧಿಕ ಇಳುವರಿ ಕೊಡುವ ನೇತ್ರ ಗಂಗಾ ತಳಿ) ಗಳು ಇವರ ಪ್ರಯತ್ನದ ಫಲವಾಗಿದೆ. ಘನ ಸಾಂದ್ರ ಪದ್ಧತಿಯಲ್ಲಿ ಗೇರು ಕೃಷಿ (ಎಕರೆಗೆ ೪೦೦ರಿಂದ ೬೦೦ ಗಿಡಗಳ ಬೆಳೆಸುವಿಕೆ) ಇವರ ಕನಸಿನ ಕೂಸು. ಇದಲ್ಲದೆ ಗೇರು ಗಿಡ ಮರಗಳ ಸವರುವಿಕೆ, ಹಳೆ ಗೇರು ತೋಟಗಳ ಸವರುವಿಕೆಯ ಮೂಲಕ ಪು:ನಶ್ಚೇತನ ಹಾಗೂ ನಿರ್ವಹಣೆ, ಮಿಶ್ರ ಬೆಳೆ, ಕಸಿ ಗೇರು ಗಿಡಗಳ ತಯಾರಿ ಹಾಗೂ ನರ್ಸರಿ ನಿರ್ವಹಣೆಯಲ್ಲಿ ತಮ್ಮದೇ ಅದ ಕೊಡುಗೆಗಳನ್ನು ನೀಡಿರುತ್ತಾರೆ.
ತಳಿ ಅಭಿವೃದ್ಧಿ, ಗೇರು ವೈವಿದ್ಯತೆಯ ಸಂಗ್ರಹ ಮತ್ತು ಸಂರಕ್ಷಣೆಯಲ್ಲಿ ವಿಶೇಷ ಕೊಡುಗೆಯನ್ನು ಕೊಟ್ಟಿರುತ್ತಾರೆ. ಗೇರು ವೈವಿಧ್ಯತೆಯ ಸಂಗ್ರಹ ಸಮಯದಲ್ಲಿ ಅತ್ಯಂತ ಅಪಾಯಕಾರಿ ಮತ್ತು ದುರ್ಗಮ ಪ್ರದೇಶಗಳಾದ ಈಶಾನ್ಯ ರಾಜ್ಯಗಳಲ್ಲಿ (ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರ ಹಾಗೂ ಅರುಣಾಚಲ) ಮುಖ್ಯವಾಗಿ ಬಾಂಗ್ಲಾದೇಶ ಮತ್ತು ಬರ್ಮಾ ದೇಶದ ಗಡಿ ಪ್ರದೇಶಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಛತ್ತೀಸಘಡದ ಹಾಗೂ ಪಶ್ಚಿಮ ಬಂಗಾಲದ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಹಾಗೂ ದೇಶದ ಹಲವಾರು ಗೇರು ಬೆಳೆಯುವ ಪ್ರದೇಶಗಳಲ್ಲಿ (ಆಂಧ್ರ ಪ್ರದೇಶ, ತಮಿಳ್ನಾಡು, ಕರ್ನಾಟಕ, ಕೇರಳ, ಜಾರ್ಖಂಡ್, ಒರಿಸ್ಸಾ, ಗುಜರಾತ, ಮಹಾರಾಷ್ಟ್ರ) ಅಪಾಯವನ್ನು ಲೆಕ್ಕಿಸದೆ ಸರ್ವೆ ನಡೆಸಿ ಗೇರು ತಳಿವೈವಿಧ್ಯತೆಯನ್ನು ಸಂಗ್ರಹಿಸಿ ಪುತ್ತೂರಿನಲ್ಲಿರುವ ಗೇರು ವೈವಿದ್ಯತೆಯ ಸಂಗ್ರಹಗಾರದ ಸ್ಥಾಪನೆ ಹಾಗೂ ನಿರ್ವಹಣಿಯಲ್ಲಿ ವಿಶೇಷ ಕೊಡುಗೆಯನ್ನು ಕೊಟ್ಟಿರುತ್ತಾರೆ.
ತಳಿ ವೈವಧ್ಯ ಸಂಗ್ರಹಿಸುವಾಗ ಮಣಿಪುರದ ಮೋರೆ, ಜಿಂಬಾಂದ ಪ್ರದೇಶಗಳಲ್ಲಿ ಉಗ್ರರರಿಂದ ಬೆದರಿಕೆಯೊಂದಿಗೆ ಎರಡು ಮೂರು ದಿನಗಳವರೆಗೆ ಬಂಧನದಲ್ಲಿ ಇದ್ದ ಸನ್ನಿವೇಶವು ಇದೆ.
ನಿವೃತ್ತಿಯ ಬಳಿಕವೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ನಿರ್ದೇಶಕ, ಹಾಗೂ ಅಪೆಡಾ ಇದರ ಸರ್ಟಿಫಿಕೇಷನ್ ಸಮಿತಿಯ ಸದಸ್ಯರಾಗಿ ಮುಂದುವರಿಯಲಿದ್ದಾರೆ.
Discussion about this post