ಹುಡುಗಿಯರನ್ನು ಚುಡಾಯಿಸಬೇಡಿ ಎಂದು ತಿಳುವಳಿಕೆ ಹೇಳಿದ ಯುವಕನೊಬ್ಬನನ್ನು ವಿದ್ಯಾರ್ಥಿಗಳ ಗುಂಪೊಂದು ಅಟ್ಟಾಡಿಸಿ ಹೊಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಫೋರಂ ಪಿಜ್ಜಾ ಮಾಲ್ ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೆ ಒಳಗಾದ ಯುವಕನನ್ನು ಬಂಟ್ವಾಳ ತಾಲೂಕಿನ ಮಂಜುನಾಥ್ ಎಂದು ಗುರುತಿಸಲಾಗಿದೆ.
ಬುಧವಾರ ನಗರದ ಫೋರಂ ಫಿಜಾ ಮಾಲ್ಗೆ ಬಂದಿದ್ದ ಕಾಲೇಜಿನ ವಿದ್ಯಾರ್ಥಿಗಳು ಹುಡುಯಗಿರನ್ನು ಚುಡಾಯಿಸುತ್ತಿದ್ದರು. ಇದನ್ನು ಕಂಡ ಮಂಜುನಾಥ್ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಪುಂಡ ವಿದ್ಯಾರ್ಥಿಗಳು ಏಕಾಏಕಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇದು ಹಿಂದೂ ರಾಷ್ಟ್ರ ನೀವು ಹೀಗೆಲ್ಲ ಮಾಡುವುದು ಸರಿಯಲ್ಲ ಎಂದು ಯುವಕ ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಪುಂಡ ವಿದ್ಯಾರ್ಥಿಗಳು ಯುವಕನನ್ನು ಸುತ್ತುವರಿದು, ಈಗ ಹೇಳು ನೋಡೋಣ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಇದರಿಂದ ಭಯಗೊಂಡ ಮಂಜುನಾಥ್ ಅಲ್ಲಿಂದ ಪಾರಾಗಲು ಯತ್ನಿಸುತ್ತಿದ್ದಂತೆ ರೌಡಿಸಂ ತೋರಿದ ವಿದ್ಯಾರ್ಥಿಗಳು ಮತ್ತೆ ಹಿಡಿದು ಮತ್ತೆ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ನಡುವೆ ಗುಂಪಿನಲ್ಲಿದ್ದ ಯುವಕನೊಬ್ಬ ಈ ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಅದೀಗ ವೈರಲ್ ಆಗಿದ್ದು ಯುವಕರ ವರ್ತನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹುಡುಗಿಯರನ್ನು ಚುಡಾಯಿಸಬೇಡಿ ಅಂದಿರುವುದಕ್ಕೆ ಹಲ್ಲೆ ನಡೆಸಿದ್ದು ಯಾವ ನ್ಯಾಯ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
ಇದೀಗ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿಲಾಗಿದ್ದು,ಈ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಲಾಗಿದೆ. ಹಲ್ಲೆ ನಡೆಸಿದವರ ಕುರಿತು ಮಾಹಿತಿ ಲಭ್ಯವಾಗಿದೆ. ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಮಹಿಳೆಯರ ರಕ್ಷಣೆ ಸಲುವಾಗಿ ಬೆಳಗಾವಿ ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆ, ಚಿತ್ರದುರ್ಗದ ಓಬವ್ವ ಪಡೆ, ಉಡುಪಿಯಲ್ಲಿ ಅಬ್ಬಕ್ಕ ಪಡೆಯಂತೆ ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಪಡೆಯಿದೆ.
ಮಫ್ತಿ ಮಹಿಳಾ ಪೊಲೀಸರು ಶಾಲಾ ಕಾಲೇಜು, ಬಸ್ ನಿಲ್ದಾಣ ಸೇರಿ ಅನೇಕ ಕಡೆ ಗಸ್ತು ನಡೆಸುತ್ತಾರೆ. ಕೀಟಲೆ ಮಾಡುವ, ಆಶ್ಲೀಲ ಕಮೆಂಟ್, ಅಸಭ್ಯ ವರ್ತನೆ ಮಾಡುವವರನ್ನು ನಿಗ್ರಹಿಸುವುದೇ ಇದರ ಉದ್ದೇಶ.
ಮಂಗಳೂರಿನ ಮಾಲ್ ಗಳಲ್ಲೂ ರಾಣಿ ಅಬ್ಬಕ್ಕ ಪಡೆ ಒಂದಿಷ್ಟು ದಿನ ಕಟ್ಟು ನಿಟ್ಟಾಗಿ ಗಸ್ತು ನಡೆಸಿದರೆ ಇಂತಹ ಪುಂಡ ರೌಡಿ ಮಹಿಳಾ ಪೀಡಕರಿಗೆ ಬ್ರೇಕ್ ಬೀಳಬಹುದು.
Discussion about this post