ಅಯೋಧ್ಯೆ ತೀರ್ಪು, ಈದ್ ಮಿಲಾದ್ ಹೀಗೆ ಸಾಲು ಸಾಲು ಕಾರಣಗಳಿಂದ ಭದ್ರತೆ ಕಾರ್ಯದಲ್ಲಿ ನಿರತರಾಗಿದ್ದ ಬೆಂಗಳೂರು ಪೊಲೀಸರು ಸುಸ್ತಾಗಿ ಹೋಗಿದ್ದರು. ಅಬ್ಬಾ ಎಲ್ಲವೂ ಶಾಂತಿಯುತವಾಗಿ ಮುಗಿಯಿತು ಎಂದು ಖಾಕಿಗಳು ನಿಟ್ಟುಸಿರು ಬಿಡುವ ಹೊತ್ತಿಗೆ ಬಂದ ಕರೆ ಬೆಚ್ಚಿ ಬೇಳಿಸಿತ್ತು.
ಯಶವಂತಪುರ ಪ್ರದೇಶದಲ್ಲಿ ದೆವ್ವಗಳು ಓಡಾಡುತ್ತಿದೆ. ಜನರಿಗೆ ಬೆದರಿಸುತ್ತಿದೆ ಅನ್ನುವ ಸುದ್ದಿ ಕೇಳಿದ ಪೊಲೀಸರು ಇದೇನಪ್ಪ ಹೊಸ ಕಾಟ ಅಂದುಕೊಂಡಿದ್ದಾರೆ. ವಿವರಿಸಿ ಕೇಳಿದ್ರೆ ಕೆಲ ಯುವಕರು ದೆವ್ವದ ಹೆಸರು ಹೇಳಿ ವಾಹನ ಸವಾರರು ಮತ್ತು ಸಾರ್ವಜನಿಕರನ್ನು ನಡು ರಾತ್ರಿಯಲ್ಲಿ ಹೆದರಿಸುತ್ತಿದ್ದಾರೆ ಅನ್ನುವುದು ಗೊತ್ತಾಗಿದೆ.
ತಕ್ಷಣ ಸ್ಥಳೀಯ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೆ ಬಿಳಿ ಬಟ್ಟೆಗೆ ರಕ್ತದ ಬಣ್ಣ ಬಳಿದುಕೊಂಡಿದ್ದ ಯುವಕರು ದೆವ್ವದ ವೇಷ ಧರಿಸಿ ಜನರನ್ನು ಹೆದರಿಸುತ್ತಿದ್ದರು. ಹೀಗಾಗಿ ಯುವಕರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ರೆ ಇದೊಂದು ಪ್ರಾಂಕ್ ಮಾಡುವ ಆಟ ಎಂದು ಗೊತ್ತಾಗಿದೆ. ಯೂ ಟ್ಯೂಬ್ ಮತ್ತು ಟಿಕ್ ಟಾಕ್ ಸಲುವಾಗಿ ನಡುರಾತ್ರಿಯಲ್ಲಿ ಇವರು ಹೀಗೆ ಮಾಡುತ್ತಿದ್ದರು ಎಂದು ವಿವರಿಸಿದ್ದಾರೆ.
ಹಾಗಂತ ಜನರೊಂದಿಗೆ ಚೆಲ್ಲಾಟವಾಡೋದು ತಪ್ಪು ತಾನೇ ಎಂದು ಯುವಕರಿಗೆ ಬುದ್ದಿ ಮಾತು ಹೇಳಿರುವ ಪೊಲೀಸರು ಯುವಕರ ಭವಿಷ್ಯ ದೃಷ್ಟಿಯಿಂದ ಪೋಷಕರನ್ನು ಕರೆಸಿ ಠಾಣಾ ಬೇಲ್ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
Discussion about this post