ಗದಗ : ಪತ್ನಿಯನ್ನು ಕೊಂದು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು 17 ವರ್ಷದ ಬಳಿಕ ಬಂಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ.
2004ರ ಡಿಸೆಂಬರ್ 16 ರಂದು ಪತ್ನಿಯ ಶೀಲ ಶಂಕಿಸಿ ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ್ದ ವೀರಯ್ಯ ಶಿವಯ್ಯ ಹಿರೇಮಠ ತಲೆಮರೆಸಿಕೊಂಡಿದ್ದ.
ಇತ್ತ ಪ್ರಕರಣ ದಾಖಲಿಸಿಕೊಂಡ ಲಕ್ಷ್ಮೇಶ್ವರ ಪಟ್ಟಣ ಠಾಣೆಯ ಪೊಲೀಸರು ಈರಮ್ಮಳನ್ನು ಕೊಂದ ಮಾಡಿದ್ದ ವೀರಯ್ಯ ಶಿವಯ್ಯ ಹಿರೇಮಠನಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಆರೋಪಿ ಪತ್ತೆಯಾಗಿರಲಿಲ್ಲ.
ಈ ನಡುವೆ ಪತ್ತೆಯಾಗದ ಪ್ರಕರಣಗಳನ್ನು ಶೀಘ್ರ ಕ್ಲಿಯರ್ ಮಾಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸೂಚಿಸಿದ್ದ ಹಿನ್ನಲೆಯಲ್ಲಿ ಈರಮ್ಮ ಕೊಲೆ ಪ್ರಕರಣದ ಕಡತದ ಧೂಳು ಕೊಡವಿದ ಪೊಲೀಸರು ಪತ್ತೆ ಕಾರ್ಯ ಪ್ರಾರಂಭಿಸಿದ್ದರು.
ಈ ವೇಳೆ ವೀರಯ್ಯ ಶಿವಯ್ಯ ಹಿರೇಮಠ ಮಂಗಳೂರಿನ ಮಲ್ಲಿಕಲ್ಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗಿದೆ.
ಖಚಿತ ಮಾಹಿತಿ ಮೇರೆಗೆ ಮಂಗಳೂರಿಗೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪತ್ನಿಯನ್ನು ಕೊಂದು ಪೊಲೀಸರ ಭಯದಿಂದ ಜಾಗ ಖಾಲಿ ಮಾಡಿದ್ದ ಆರೋಪಿ ತಮಿಳುನಾಡು ಕಡೆಗೆ ಪರಾರಿಯಾಗಿದ್ದ.
ಅಲ್ಲಿ ಒಂದಿಷ್ಟು ಸಮಯ ಕೂಲಿ ಮಾಡಿ ಜೀವನ ನಡೆಸಿದ್ದ. ಬಳಿಕ ಕೇರಳಕ್ಕೆ ತೆರಳಿ ಅಲ್ಲೂ ಕೂಲಿ ಮಾಡಿ ಜೀವನ ಸಾಗಿಸಿದ್ದ. ಇದಾದ ಬಳಿಕ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಎಂದು ಗೊತ್ತಾಗಿದೆ,
ಕೂಲಿ ಕೆಲಸದ ಬಳಿಕ ಮಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿದ್ದ.
Discussion about this post