ನವದೆಹಲಿ : ಕೊರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಪಾವತಿಸಲು 6 ವಾರಗಳ ಗಡುವು ವಿಧಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ಮಾರ್ಗಸೂಚಿಸಿ ರೂಪಿಸಿ ಎಂದು ಆದೇಶಿಸಿದೆ.
ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು ಎಂದು ನಿರ್ದೇಶಿಸಿರುವ ಸುಪ್ರೀಂಕೋರ್ಟ್ ನಾಲ್ಕು ಲಕ್ಷದೊಳಗೆ ಎಷ್ಟು ಮೊತ್ತದ ಪರಿಹಾರ ಕೊಡಬಹುದು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ.
ಹೀಗಾಗಿ ದೇಶದಲ್ಲಿ ಈವರೆಗೂ ಸುಮಾರು 3.98 ಲಕ್ಷ ಮಂದಿ ಕೋವಿಡ್ನಿಂದ ಮೃತಪಟ್ಟಿದ್ದು ಅವರಿಗೆ ಪರಿಹಾರ ನೀಡುವ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕೆ ಎದುರಾಗಿದೆ.
ಈಗಾಗಲೇ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ಕೊರೋನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಪರಿಹಾರ ನೀಡುವ ಬಗ್ಗೆ ಘೋಷಣೆ ಮಾಡಿವೆ.
ಈ ನಡುವೆ ಈ ಪರಿಹಾರ ಹಣವನ್ನು ಕೇಂದ್ರ ಸರ್ಕಾರವೇ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೀಡಬೇಕು ಅನ್ನುವ ವಿಚಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ಮೃತಪಟ್ಟವರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ. ಎಕ್ಸ್ ಗ್ರೇಷಿಯಾ ಪರಿಹಾರ ನೀಡಲು ಸಾಧ್ಯವಿಲ್ಲ ಅಂದಿತ್ತು
ಒಂದು ವೇಳೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಈ ರೀತಿಯ ಎಕ್ಸ್ಗ್ರೇಷಿಯಾ ನೀಡಿದರೆ ಪ್ರಕೃತಿ ವಿಕೋಪ ಪರಿಹಾರಕ್ಕೆ ಹಣ ಖಾಲಿಯಾಗಲಿದೆ. ಚಂಡಮಾರುತ, ನೆರೆ, ಭೂಕಂಪದಂತಹ ಪ್ರಕೃತಿ ವಿಕೋಪಗಳು ಸಂಭವಿಸಿದರೆ ಆ ಸಂದರ್ಭದಲ್ಲೂ ಪರಿಹಾರ ಹಾಗೂ ಪುನರ್ ವಸತಿಗೆ ಹಣ ಇಲ್ಲದಂತಾಗುತ್ತದೆ ಎಂದು ಕೇಂದ್ರ ಹೇಳಿತ್ತು.
ಜೊತೆಗೆ ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ವಿಮಾ ಕಂಪೆನಿಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ 442 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಆದರೆ ಈ ಉತ್ತರದಿಂದ ತೃಪ್ತವಾಗದ ಕೋರ್ಟ್, ಆರು ತಿಂಗಳ ಒಳಗಾಗಿ ಇದಕ್ಕೆ ಮಾರ್ಗಸೂಚಿಗಳನ್ನು ರೂಪಿಸುವಂತೆ ಆದೇಶಿಸಿದೆ.
Discussion about this post