ನವೆಂಬರ್ 1ರಂದು ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ತಂಡದ ಕಾರ್ಯಕರ್ತರು ಮಿಂಟೋ ಆಸ್ಪತ್ರೆಗೆ ಹೋಗಿ ಗಲಾಟೆ ಮಾಡಿದ್ದರು. ಆಸ್ಪತ್ರೆಯ ಕಿರಿಯ ವೈದ್ಯರು ಕನ್ನಡ ಮಾತನಾಡುತ್ತಿಲ್ಲವೆಂದು ತಗಾದೆ ತೆಗೆದಿದ್ದರು. ಕರವೇಯ ಅಶ್ವಿನಿ ಗೌಡ ಅವರು ಕಿರಿಯ ವೈದ್ಯೆಯೊಬ್ಬರ ಮೇಲೆ ಕೈ ಕೂಡ ಮಾಡಿದ್ದರೆನ್ನಲಾಗಿದೆ.
ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಿಂಟೋ ಆಸ್ಪತ್ರೆಯ ವೈದ್ಯರು ಮುಷ್ಕರ ನಡೆಸಿದ್ದಾರೆ. ಗಲಾಟೆ ಮಾಡಿದ ಕರವೇ ಕಾರ್ಯಕರ್ತರ ವಿರುದ್ಧ ಕ್ರಮ ಜರುಗಿಸಬೇಕು. ಹಲ್ಲೆ ಎಸಗಿದ ಅಶ್ವಿನಿ ಗೌಡ ಅವರನ್ನು ಬಂಧಿಸಬೇಕೆಂದು ವೈದ್ಯರು ಆಗ್ರಹಿಸಿದ್ದರು. ಅಶ್ವಿನಿ ಗೌಡ ಅವರ ಬಂಧನವಾಗದ ಹೊರತು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ವೈದ್ಯರು ಹೇಳಿದ್ದರು.
ಇದೀಗ ವಿವಿ ಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗುವುದರೊಂದಿಗೆ ಪೊಲೀಸರು ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ.
ಹಿರಿಯ ವೈದ್ಯ ಡಾ. ಹೆಚ್.ಎಸ್. ಸತೀಶ್ ( ಬೆಂಗಳೂರು ನಗರ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಮತ್ತು ಡೀನ್ ) ಅವರು ನೀಡಿದ ದೂರಿನ ಮೇರೆಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ತಂಡವು ಅಂದು ಗಲಾಟೆ ನಡೆಸಿತಾದರೂ ದೂರಿನಲ್ಲಿ ನಿರ್ದಿಷ್ಟವಾಗಿ ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸಲಾಗಿಲ್ಲ.
ಸುಮಾರು 30-35 ಕರವೇ ಕಾರ್ಯಕರ್ತರು ಕರ್ತವ್ಯ ನಿರತ ವೈದ್ಯರ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ. ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.
Discussion about this post