ಬೆಂಗಳೂರು : ದೇಶದಲ್ಲೇ ಉತ್ತಮ ಹೆಸರು ಪಡೆದಿರುವ ಕರ್ನಾಟಕ ಪೊಲೀಸ್ ಗೌರವಕ್ಕೆ ಮಸಿ ಬಳಿಯಲು ಕೆಲ ದುಷ್ಟ ಶಕ್ತಿಗಳು ಸತತ ಪ್ರಯತ್ನ ನಡೆಸುತ್ತಿದೆ.
ಇಲಾಖೆ ಸೇರಿರುವ ಕೆಲ ವ್ಯಕ್ತಿಗಳು ಲಂಚದ ಆಸೆಗೆ ಬಿದ್ದು, ಇಲಾಖೆಯ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ.
ಇದನ್ನೂ ಓದಿ : ಖಾಕಿಗಳ ಕರ್ಮಕಾಂಡ : 15 ಲಕ್ಷ ಸುಲಿಗೆ ಆರೋಪ : ಗೃಹ ಇಲಾಖೆಗೆ ನೋಟಿಸ್
ದಾಂಧಲೆ ಪ್ರಕರಣವೊಂದರಲ್ಲಿ ಆರೋಪಿ ಪರ ಬಿ ರಿಪೋರ್ಟ್ ಸಲ್ಲಿಸಲು 10 ಲಕ್ಷ ಲಂಚ ಪಡೆದ ಇಂದಿರಾನಗರ ಇನ್ಸ್ ಪೆಕ್ಟರ್ ಬಿ.ರಾಮಮೂರ್ತಿ ವಿರುದ್ಧ ಇದೀಗ ಎಸಿಬಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ಲಾಕ್ ಡೌನ್ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಇಂದಿರಾ ನಗರ ಕ್ಲಬ್ ಪ್ರವೇಶಿಸಿದ್ದ ಕ್ಲಬ್ ಸದಸ್ಯ ರಾಮ್ ಮೋಹನ್ ಮೆನನ್ ಸೆಕ್ಯೂರಿಟಿ ಗಾರ್ಡ್ ಗಳನ್ನು ಬೆದರಿಸಿದ್ದರು. ಮಾತ್ರವಲ್ಲದೆ ಕರ್ತವ್ಯ ನಿರತ ಸಿಬ್ಬಂದಿಗಳನ್ನೂ ನಿಂದಿಸಿದ್ದರು.
ಈ ಸಂಬಂಧ ಇಂದಿರಾ ನಗರ ಕ್ಲಬ್ ಕಾರ್ಯದರ್ಶಿ ನಾಗೇಂದ್ರ ಅವರು ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ನಡುವೆ ಎಲ್ಲಿ ಪ್ರಕರಣದಿಂದ ಜೈಲು ಪಾಲಾಗಬೇಕಾಗುತ್ತದೋ ಅನ್ನುವ ಕಾರಣಕ್ಕೆ ರಾಮ್ ಮೋಹನ್ ಇನ್ಸ್ ಪೆಕ್ಟರ್ ರಾಮಮೂರ್ತಿ ಮತ್ತು ಪಿಎಸ್ಐ ಚಿದಾನಂದ್ ಜೊತೆ ಚರ್ಚೆ ನಡೆಸಿ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಲು ಮುಂದಾಗಿದ್ದರು.
ಮಾತ್ರವಲ್ಲದೆ ಇದಕ್ಕಾಗಿ 10 ಲಕ್ಷ ರೂಪಾಯಿ ಡೀಲ್ ಕೂಡಾ ನಡೆದಿತ್ತು. ಈ ಸಂಬಂಧ ಚೆಕ್ ಮೂಲಕ ರಾಮ್ ಮೋಹನ್ 2.95 ಲಕ್ಷ ರೂಪಾಯಿ ಹಣವನ್ನು ರಾಮಮೂರ್ತಿಗೆ ನೀಡಿದ್ದರು. ಉಳಿದ ಹಣವನ್ನು ನಗದು ರೂಪದಲ್ಲಿ ನೀಡಲಾಗಿತ್ತು.
ಈ ವಿಷಯ ತಿಳಿದ ಇಂದಿರಾ ನಗರ ಕ್ಲಬ್ ಕಾರ್ಯದರ್ಶಿ ನಾಗೇಂದ್ರ ಅವರು ಎಸಿಬಿಗೆ ದೂರು ದಾಖಲಿಸಿದ್ದರು. ದೂರು ಹಾಗೂ ಸಾಕ್ಷಿ ಪರಿಶೀಲನೆ ನಡೆಸಿದ ಎಸಿಬಿ ಅಧಿಕಾರಿಗಳು FIR ದಾಖಲಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಇದೀಗ ಸರ್ಕಾರ ಅನುಮತಿ ನೀಡಿದ್ದು, ತನಿಖೆ ಪ್ರಾರಂಭಗೊಂಡಿದೆ.
Discussion about this post