ಬೆಂಗಳೂರು : ಒನ್ ವೈಫ್ ಛಾಲೆಂಜ್ ಮಾಡಿ ಎಡವಟ್ಟು ಮಾಡಿಕೊಂಡಿರುವ ಸಚಿವ ಡಾ,ಸುಧಾಕರ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೇಳಿಕೆ ಕುರಿತಂತೆ ಸಿಎಂ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಉಪಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆಗಳ ಅಗತ್ಯವಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ.
ಮತ್ತೊಂದು ಕಡೆ ಸುಧಾಕರ್ ಹೇಳಿಕೆಯನ್ನು ವೈಯುಕ್ತಿಕ ಅಂದಿರುವ ರಾಜ್ಯ ಸರ್ಕಾರ, ಈ ಹೇಳಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಅಂದಿದೆ. ಈ ಮೂಲಕ ಸುಧಾಕರ್ ಹೇಳಿಕೆಯನ್ನು ಸಮರ್ಥಿಸುವ ಗೋಜಿಗೆ ಬಿಜೆಪಿ ಸಚಿವರು ಹೋಗಿಲ್ಲ.
ವಿಧಾನಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಇದು ಅವರ ವೈಯುಕ್ತಿಕ ಹೇಳಿಕೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇನ್ನು ಮಿತ್ರಮಂಡಳಿ ಸದಸ್ಯರೂ ಕೂಡಾ ಸುಧಾಕರ್ ರಕ್ಷಣೆಗೆ ದೌಡಾಯಿಸಿಲ್ಲ. ಪ್ರತೀ ಸಲ ಮಿತ್ರ ಮಂಡಳಿಯಲ್ಲಿ ಯಾರಿಗಾದರೂ ತೊಂದರೆಯಾದರೆ ಮಿತ್ರ ಮಂಡಳಿಯ ಸದಸ್ಯರು ಅದನ್ನು ಎದುರಿಸುತ್ತಿದ್ದರು.
ಆದರೆ ಈ ಬಾರಿ ಒನ್ ವೈಫ್ ಛಾಲೆಂಜ್ ವಿಚಾರದಲ್ಲಿ ಅವರು ಕೂಡಾ ಅಂತರ ಕಾಯ್ದುಕೊಂಡಿದ್ದಾರೆ.
ಇನ್ನು ಸುಧಾಕರ್ ಹೇಳಿಕೆಯಿಂದ ಕೇವಲ ಸರ್ಕಾರ ಮಾತ್ರವಲ್ಲದೆ ಪಕ್ಷ ಕೂಡಾ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ. ಇಷ್ಟು ದಿನಗಳ ಕಾಂಗ್ರೆಸ್ ವಿರುದ್ಧ ಟ್ವಿಟರ್ ನಲ್ಲಿ ಬಾಣ ಬಿಡುತ್ತಿದ್ದ ಬಿಜೆಪಿ ಸುಧಾಕರ್ ಹೇಳಿಕೆಯಿಂದ ಕೈ ಕಟ್ಟಿ ಕೂರಬೇಕಾದ ಪರಿಸ್ಥಿತಿಗೆ ಬಂದಿದೆ.
ಬೇರೆಯವರ ಹೆಂಡ್ತಿ ಸಂಖ್ಯೆಯನ್ನು ಲೆಕ್ಕ ಹಾಕಲು ಹೋಗಿ ಸುಧಾಕರ್ ಇದೀಗ ಒಂಟಿಯಾಗಿದ್ದಾರೆ.
Discussion about this post