ಕಾಂಗ್ರೆಸ್ ಪ್ರತಿಭಟನೆ ನಡುವೆಯೂ ಇಂಧನ ದರ ಗಗನ ಮುಖಿಯಾಗಿದೆ. ಕೆಲವು ಜಿಲ್ಲೆಗಳಲ್ಲಿ ನಿನ್ನೆ ನೂರರ ಗಡಿ ದಾಟಿದ್ದ ಪೆಟ್ರೋಲ್ ದರ, ಇಂದು ಮತ್ತೆ ಕೆಲವು ಜಿಲ್ಲೆಗಳಲ್ಲಿ ನೂರರ ಗಡಿ ದಾಟಿದೆ.
ಇನ್ನು ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಬೆಲೆಯಿದ್ದು ಅಲ್ಲಿ ಪೆಟ್ರೋಲ್ 102.30 ಹಾಗೂ ಡೀಸೆಲ್ ಗೆ 94.39 ದಾಖಲಾಗಿದೆ. ಇನ್ನುಳಿದಂತೆ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಪೆಟ್ರೋಲ್ ದರ ಮೂರಂಕಿ ದಾಟಿದೆ.
ಕರ್ನಾಟಕದ ಜಿಲ್ಲೆಗಳ ಪೈಕಿ ಬಳ್ಳಾರಿ, ಬೀದರ್, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು,ಶಿವಮೊಗ್ಗ, ತುಮಕೂರು ಮತ್ತು ಉತ್ತರ ಕನ್ನಡದಲ್ಲಿ ನಿನ್ನೆಯೇ ಪೆಟ್ರೋಲ್ ದರ 100ರ ಗಡಿ ದಾಟಿತ್ತು.
ಇನ್ನು ಇಂದು ತುಮಕೂರು,ರಾಯಚೂರು,ಕೊಪ್ಪಳ, ಕೊಡಗು, ಗದಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಬೀದರ್, ಬಳ್ಳಾರಿ, ಹಾಗೂ ಬಾಗಲಕೋಟೆಯಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದೆ.
ಡೀಸೆಲ್ ದರವೂ 92 93ರ ಗಡಿಯಲ್ಲಿ ಕುಣಿಯುತ್ತಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿಲ್ಲ ಅಂದ್ರೆ ಅದು ಕೂಡಾ ಶತಕ ಬಾರಿಸೋದು ಗ್ಯಾರಂಟಿ.ಆದರೆ ರಾಜಸ್ಥಾನದಲ್ಲಿ ಡೀಸೆಲ್ ದರವೂ ಶತಕ ಬಾರಿಸಿಯಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡೀಸೆಲ್ ದರ 100 ಗಡಿ ದಾಟಿದ್ದು, ರಾಜಸ್ಥಾನದ ಗಂಗಾನಗರದ ಬಂಕ್ ಒಂದರಲ್ಲಿ 100.05 ರೂಪಾಯಿಗೆ ಡೀಸೆಲ್ ಮಾರಾಟ ಮಾಡಲಾಗಿದೆ.
ಕೊರೋನಾ, ಲಾಕ್ ಡೌನ್ ಕಾರಣದಿಂದ ಜನ ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಅದರ ನಡುವೆ ಇಂಧನ ದರ ಏರಿಕೆಯಿಂದ ಅಗತ್ಯ ವಸ್ತುಗಳ ದರವೂ ಏರಿಕೆಯಾಗುತ್ತದೆ. ಹೀಗೆ ಎಲ್ಲಾ ದರ ಏರಿಕೆಯಾದರೆ ಬಡ ಹಾಗೂ ಮಧ್ಯಮ ವರ್ಗದ ಮಂದಿ ಬದುಕುವುದೇ ಕಷ್ಟ.
ದುರಂತ ಅಂದ್ರೆ ನಮ್ಮನಾಳುವ ಮಂದಿಗೆ ಇಂಧನ ದರ ಏರಿಕೆಯ ಬಿಸಿ ತಟ್ಟುವುದಿಲ್ಲ. ಯಾಕಂದ್ರೆ ಅವರೆಲ್ಲಾ ನಮ್ಮ ತೆರಿಗೆ ದುಡ್ಡಿನಲ್ಲಿ ಜೀವನ ನಡೆಸುವ ಮಂದಿ.
Discussion about this post