ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇರೋದು ಸಹಜ. ಆದರೆ ಜೆಡಿಎಸ್ ಶಾಸಕರಿಗೂ ಅಸಮಾಧಾನ ಇತ್ತು ಅನ್ನುವುದೇ ಅಚ್ಚರಿಗೆ ಕಾರಣವಾಗಿದೆ. ಆದರೆ ಆ ಅಸಮಾಧಾನಕ್ಕೆ ಕಾರಣ ದೇವೇಗೌಡರ ಕುಟುಂಬ ಸದಸ್ಯರು ಅನ್ನುವುದು ಮಾತ್ರ ದುರಂತ.
ಜೆಡಿಎಸ್ ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರ ಜೊತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ತಮ್ಮ ರಾಜೀನಾಮೆಗೆ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡದ ಕುಟುಂಬ ಸದಸ್ಯರನ್ನೇ ಅದರಲ್ಲೂ ಅವರ ಮನೆಯ ಹೆಣ್ಣು ಮಕ್ಕಳನ್ನು ನೇರ ಹೊಣೆಗಾರರನ್ನಾಗಿಸಿದ್ದಾರೆ. ಗೌಡರ ಕುಟುಂಬ ರಾಜಕಾರಣವೇ ನನ್ನ ರಾಜೀನಾಮೆಗೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು ದೇವೇಗೌಡರ ಪುತ್ರಿಯರಿಂದ ತಮಗೆ ನಿರಂತರ ಕಿರುಕುಳವಾಗುತ್ತಿತ್ತು. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರೆ, ಅವರು ನಮ್ಮ ಮುಖ ಕೊಟ್ಟು ಮಾತನಾಡಿಸುತ್ತಿರಲಿಲ್ಲ. ನಾವು ನಿಂತುಕೊಂಡೇ ಇರಬೇಕಾಗಿತ್ತು. ತಾಲೂಕಿನ ಕಳ್ಳರು ಊಟದ ಟೇಬಲ್ ನಲ್ಲಿ ಕುಳಿತುಕೊಂಡಿರುತ್ತಿದ್ದರು ಎಂದು ತಮಗಾದ ಅವಮಾನವನ್ನು ಬಿಚ್ಚಿಟ್ಟಿದ್ದಾರೆ.
ಇದೇ ವೇಳೆ ಮಂಡ್ಯಕ್ಕೆ ಕೊಟ್ಟ ಅನುದಾನದ ಭರವಸೆಗಳು ಕೇವಲ ಪೇಪರ್ ನಲ್ಲಿದೆ ಅಂದಿರುವ ನಾರಾಯಣಗೌಡ ತಮ್ಮ ಕ್ಷೇತ್ರಕ್ಕೆ ಬಿಡಿಗಾಸು ಕೊಟ್ಟರೆ ಬೇರೆ ಕ್ಷೇತ್ರಗಳಿಗೆ ಸಾವಿರ ಕೋಟಿ ಲೆಕ್ಕದಲ್ಲಿ ಅನುದಾನ ಸಿಗುತ್ತದೆ. ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷ ಸ್ಥಾನ ಬೇಕು ಅಂದೆ, ಆದರೆ ದೇವೇಗೌಡರ ಮನೆಯ ಹೆಣ್ಣು ಮಕ್ಕಳು ತಪ್ಪಿಸಿದರು ಎಂದು ದೂರಿದ್ದಾರೆ.
ಕೆ.ಆರ್. ಪೇಟೆ ಶಾಸಕರ ಮಾತುಗಳನ್ನು ಕೇಳಿದ್ರೆ, ಕುಟುಂಬ ರಾಜಕಾರಣ ಅನ್ನುವುದು ಮಕ್ಕಳು ಸೊಸೆ ಮೊಮ್ಮಕ್ಕಳು ಮಾತ್ರವಲ್ಲ ಮನೆಯ ಹೆಣ್ಣು ಮಕ್ಕಳೂ ತೆರೆ ಮರೆಯಲ್ಲಿ ರಾಜಕೀಯ ಕಸರತ್ತು ನಡೆಸಿದ್ದಾರೆ ಅನ್ನುವುದು ಸ್ಪಷ್ಟ.
ಒಂದು ವೇಳೆ ಶಾಸಕರ ಮಾತು ಸತ್ಯವಾದರೆ ಇದು ರಾಜ್ಯದ ದುರಂತ ಅನ್ನದೇ ವಿಧಿಯಿಲ್ಲ. ನಾಳೆ ಹೊಸ ಮುಖ್ಯಮಂತ್ರಿ ಬಂದರೆ ಅವರ ಮನೆಯ ಹೆಣ್ಣು ಮಕ್ಕಳು ರಾಜಕೀಯ ಮಾಡಲ್ಲ ಅನ್ನುವುದು ಯಾವ ಗ್ಯಾರಂಟಿ ಅನ್ನುವುದೇ ಈಗಿರುವ ಸಂಶಯ.
ನಾರಾಯಣ ಗೌಡ ಅವರು ಮಾಡಿರುವುದು ಚಿಕ್ಕ ಆರೋಪವಲ್ಲ. ಹೀಗಾಗಿ ದೇವೇಗೌಡರು ಇದಕ್ಕೆ ಉತ್ತರಿಸಲೇಬೇಕು. ಕನಿಷ್ಟ ಪಕ್ಷ ಆರೋಪವನ್ನು ಸಾಬೀತು ಮಾಡಲಿ ಅನ್ನುವ ಸವಾಲನ್ನು ದೇವೇಗೌಡರು ಎಸೆಯಲೇಬೇಕು. ಇಲ್ಲವಾದರೆ ನಾರಾಯಣಗೌಡ ಅವರು ಹೇಳಿದ್ದು ಸತ್ಯ ಎಂದು ನಂಬದೇ ವಿಧಿಯಿಲ್ಲ.
Discussion about this post