ಯಡಿಯೂರಪ್ಪನವರ ಆಡಿಯೋಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಯೋಗ ಈಗಾಗಲೇ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಜೊತೆಗೆ ಸುಪ್ರೀಂಕೋರ್ಟ್ ಕೂಡಾ ಆಡಿಯೋ ವಿಚಾರ ಕುರಿತಂತೆ ವಿಚಾರಣೆಗೆ ಸಮ್ಮಿತಿಸಿದೆ. ಹೀಗಾಗಿ ಬಿಜೆಪಿ ಹಾಗೂ ಯಡಿಯೂರಪ್ಪ ಅವರಿಗೆ ನಡುಕ ಶುರುವಾಗಿದೆ.
ಈ ನಡುವೆ ವಿಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿರುವ ಸಿಎಂ ಯಡಿಯೂರಪ್ಪ, ಅನರ್ಹ ಶಾಸಕರಿಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದ್ದಾರೆ.
ಯಡಿಯೂರಪ್ಪ ಆಡಿಯೋ ವಿಚಾರ ಅನರ್ಹ ಶಾಸಕರ ಭವಿಷ್ಯ ಕುತ್ತು ತರಲಿದೆ ಅನ್ನುವುದು ಖಚಿತವಾಗುತ್ತಿದ್ದಂತೆ ಪ್ರತ್ಯಾಸ್ತ್ರವೊಂದನ್ನು ಪ್ರಯೋಗಿಸಲು ಅನರ್ಹ ಶಾಸಕರು ಮುಂದಾಗಿದ್ದಾರೆ.
ಈ ಸಂಬಂಧ ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋವನ್ನು ಸುಪ್ರೀಂಕೋರ್ಟಿಗೆ ಸಲ್ಲಿಸುವ ಸಾಧ್ಯತೆಗಳಿವೆ.
ಈ ಹಿಂದೆ ಧರ್ಮಸ್ಥಳದ ಶಾಂತಿವನದಲ್ಲಿ ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿತ್ತು.
ಹೀಗಾಗಿ ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯನವರೇ ಕಾರಣ ಅನ್ನುವ ವಾದ ಮುಂದಿಟ್ಟುಕೊಂಡು ತಮ್ಮ ಕಕ್ಷಿದಾರರ ರಕ್ಷಣೆಗೆ ಅನರ್ಹ ಶಾಸಕರ ಪರ ವಕೀಲರು ಮುಂದಾಗುತ್ತಾರೆ ಎನ್ನಲಾಗಿದೆ.
Discussion about this post