ಒನ್ ರ್ಯಾಂಕ್, ಒನ್ ಪೆನ್ಷನ್, ಒನ್ ನೇಷನ್ ಒನ್ ಟ್ಯಾಕ್ಸ್, ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ‘ಒನ್ ನೇಷನ್ ಒನ್ ಎಲೆಕ್ಷನ್, ಒನ್ ನೇಷನ್ ಒನ್ ಲಾ, ಜಾರಿಗೆ ಚಿಂತನೆ ನಡೆಸಿದೆ.
ಇದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ‘ಒಂದು ದೇಶ ಒಂದು ಭಾಷೆ’ ವಿಚಾರ ಪ್ರಸ್ತಾಪ ಮಾಡಿರುವುದು ಬಿಜೆಪಿ ಪಾಲಿಗೆ ಸಂಕಷ್ಟ ತಂದೊಡ್ಡುವ ಲಕ್ಷಣ ಗೋಚರಿಸುತ್ತಿದೆ.
ಹಿಂದಿ ದಿವಸ್ ಆಚರಣೆಯಂದು ದೇಶಕ್ಕೊಂದೇ ಭಾಷೆ ಕಲ್ಪನೆ ಹರಿಬಿಟ್ಟು ಇದೀಗ ಅಮಿತ್ ಶಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕರ್ನಾಟಕದಲ್ಲೂ ಆಕ್ರೋಶ ವ್ಯಕ್ತವಾಗಿದೆ.
ಇದು ವಿವಿಧತೆಯಲ್ಲಿ ಏಕತೆಯನ್ನು ಮುಗಿಸುವ ಹುನ್ನಾರ ಎಂದು ಟೀಕಿಸಿರುವ ಪ್ರಾದೇಶಿಕ ಭಾಷಾ ಪ್ರೇಮಿಗಳು, ಹಿಂದಿ ಹೇರಿಕೆ ಸಲ್ಲದು, ಹಿಂದಿಯನ್ನು ಪ್ರೀತಿಯಿಂದ ಕಲಿಯುವಂತಾಗಬೇಕು ಹೊರತು ಒತ್ತಾಯದಿಂದಲ್ಲ ಅಂದಿದ್ದಾರೆ.
ಹಿಂದಿಯನ್ನು ಹೇರುವುದರಿಂದ ಈಗಾಗಲೇ ಸಂಕಷ್ಟದಲ್ಲಿರುವ ಪ್ರಾದೇಶಿಕ ಭಾಷೆಗಳು ಮತ್ತಷ್ಟು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಸ್ಥಳೀಯ ಸೊಗಡನ್ನು ಹೊಂದಿರುವ ಭಾಷೆಗಳು ಇದರಿಂದ ಅಳಿದು ಹೋಗಬಹುದು. ಭಾಷಾ ಹೇರಿಕೆ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಇನ್ನಿಲ್ಲವಾಗಿಸುತ್ತದೆ ಅನ್ನುವ ಆತಂಕವೂ ಈ ವೇಳೆ ವ್ಯಕ್ತವಾಗಿದೆ.
ಈ ಬಗ್ಗೆ ಖಾರವಾದ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧವೂ ಇದೆ. ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ. ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ” ಎಂದಿದ್ದಾರೆ.
ಇದಕ್ಕೆ ದನಿಗೂಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕನ್ನಡ ಭಾಷಾ ದಿನದ ಆಚರಣೆ ಯಾವಾಗ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಅಮಿತ್ ಶಾ ಒಂದು ದೇಶ ಒಂದು ಭಾಷೆ ಕುರಿತಂತೆ ಹೇಳಿರುವ ಮಾತುಗಳು ಕೇಳುವುದಕ್ಕೆ ತುಂಬಾ ಸೊಗಸಾಗಿದೆ. ಹಾಗಂತ ಇದು ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ಕಾನೂನಂತೆ ಅನುಕೂಲವಲ್ಲ. ಅದರಲ್ಲೂ ಕರ್ನಾಟಕದಂತಹ ಬಹು ಸಂಸ್ಕೃತಿಯನ್ನು ಹೊಂದಿರುವ ರಾಜ್ಯಗಳಿಗೆ ಇದು ಶಾಪವೇ ಸರಿ.
Discussion about this post