ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡಿನ ಯುವಕನೊಬ್ಬನಲ್ಲಿ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವನ ಜೊತೆ ಪ್ರಯಾಣಿಸಿದ ಸಹ ಪ್ರಯಾಣಿಕರನ್ನು ಪತ್ತೆ ಮಾಡಿ ಗೃಹ ಬಂಧನ ವಿಧಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ದ.ಕ. ಜಿಲ್ಲಾಡಳಿತವು ಆರೋಗ್ಯ ಇಲಾಖೆಗೆ ಸೂಚಿಸಿದೆ.
ಯುವಕ ಓಡಾಡಿದ ಮಾರ್ಗಸೂಚಿಯನ್ನು ಈಗಾಗಲೇ ಕಾಸರಗೋಡು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಮಾ. 14ರಂದು ಬೆಳಗ್ಗೆ 5.20ಕ್ಕೆ ಮಂಗಳೂರಿಗೆ ಬಂದ ಬಳಿಕ ಇಬ್ಬರು ಸಂಬಂಧಿಕರೊಂದಿಗೆ ಅವರು ಕಾಸರಗೋಡಿಗೆ ತೆರಳಿದ್ದಾರೆ. ಅಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಆತನನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. 8 ಗಂಟೆಗೆ ನಾಲ್ವರೂ ಕೂಡ ಇನ್ನೊಂದು ಖಾಸಗಿ ಆಸ್ಪತ್ರೆಯ ಕ್ಯಾಂಟಿನ್ಗೆ ತೆರಳಿ ಚಹಾ ಸೇವಿಸಿದ್ದಾರೆ. ಬಳಿಕ ಪರೀಕ್ಷೆಗೆ ಗಂಟಲು ಸ್ರಾವ ಮಾದರಿ ನೀಡಲು ಸರಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಮಧ್ಯಾಹ್ನ ಒಂದು ಗಂಟೆಗೆ ಕಾಸರಗೋಡಿನ ಬೇವಿಂಜೆಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿ ರೋಗಿ ಮೂರು ದಿನ ಕಾಲ ನಿಗಾದಲ್ಲಿದ್ದ. ಸೋಮವಾರ ರಾತ್ರಿ ಬಂದ ವೈದ್ಯಕೀಯ ಪರೀಕ್ಷೆಯಲ್ಲಿ ಆತನಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಯುವಕನನ್ನು ಕಾಸರಗೋಡು ಆಸ್ಪತ್ರೆಯ ವಿಶೇಷ ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆ ವ್ಯಕ್ತಿ ಬಂದ ವಿಮಾನದಲ್ಲಿ ಇದ್ದ ಪ್ರಯಾಣಿಕರೆಷ್ಟು ಆ ಪೈಕಿ ದ.ಕ. ಸೇರಿದಂತೆ ಕರ್ನಾಟಕ ರಾಜ್ಯದ ಎಷ್ಟು ಪ್ರಯಾಣಿಕರು ಇದ್ದರು ಅನ್ನುವ ಮಾಹಿತಿಯನ್ನು ಕಲೆ ಹಾಕುವ ಇದೀಗ ಪ್ರಗತಿಯಲ್ಲಿದೆ.
ಈ ನಡುವೆ ಕೊವಿಡ್-19 ಪೊಸಿಟಿವ್ ಆದ ಕಾಸರಗೋಡು ವ್ಯಕ್ತಿಯು ದುಬೈಯಿಂದ ಏಯರ್ ಇಂಡಿಯ ಎಕ್ಸ್ಪ್ರೆಸ್ 1X 814 ನಲ್ಲಿ ಮಂಗಳೂರಿನಲ್ಲಿ 14.03.2020ರಂದು ಬೆಳಗ್ಗೆ ಬಂದು ಇಳಿದಿದ್ದಾರೆ. ಈ ವಿಮಾನದಲ್ಲಿ ಯಾತ್ರೆ ಮಾಡಿದವರು, ಆದಷ್ಟು ಬೇಗನೆ ಕೆಳಗೆ ಕಾಣುವ ದೂರವಾಣಿ ಸಂಖ್ಯೆಯಲ್ಲಿ ತಿಳಿಸಬೇಕಾಗಿ ಕಾಸರಗೋಡು ಜಿಲ್ಲೆ ಕಲೆಕ್ಟರ್ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ. CORONA CONTROL CELL: 9946000493,9946000293
Discussion about this post