ರಾಜ್ಯದ ಗೃಹ ಸಚಿವರು Zero ಟ್ರಾಫಿಕ್ ಇಲ್ಲದೆ ರಸ್ತೆಗೆ ಇಳಿಯುವುದಿಲ್ಲ. ಮತ್ತೊಬ್ಬರು ಹೆಲ್ಮೆಟ್ ಇಲ್ಲದೆ, ಬೈಕ್ ನಲ್ಲಿ ತ್ರಿಬಲ್ ರೈಡ್ ಮಾಡ್ತಾರೆ ಇದು ನಮ್ಮ ಜನಪ್ರತಿನಿಧಿಗಳ ಹಣೆ ಬರಹ.
ಇದೀಗ ಪೊಲೀಸ್ ಎಸ್ಕಾರ್ಟ್ನಲ್ಲಿಯೇ ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ವಕ್ಫ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ ಅವರು ದೂರು ನೀಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿಧನಗೆರೆ ಗ್ರಾಮದ ಸಂಬಂಧಿಕರೊಬ್ಬರ ಮಗಳ ಮದುವೆಗೆ ಪಟ್ಟಣದ ದಿವ್ಯಾ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ಸಚಿವ ಜಮೀರ್ ಆಹಮದ್ ಬೆಂಬಲಿಗರ ಬುಲೆಟ್ ವಾಹನದಲ್ಲಿ ಇನ್ನಿಬ್ಬರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಪಟ್ಟಣದ ಕಲ್ಯಾಣ ಮಂಟಪಕ್ಕೆ ಮೆರವಣಿಗೆ ಮೂಲಕ ಬೆಂಬಲಿಗರ ಜೈಕಾರದೊಂದಿಗೆ ಆಗಮಿಸಿದ್ದಾರೆ.ಇದರಲ್ಲಿ ಶಾಸಕ ಡಾ.ರಂಗನಾಥ್ ಕೂಡಾಸೇರಿದ್ದರು.
ಸಾಮಾನ್ಯವಾಗಿ ಜನ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಮಾಡಿದರೆ ಪೊಲೀಸರು ದಂಡ ಕಟ್ಟಿಸುತ್ತಾರೆ. ಹೆಲ್ಮೆಟ್ ಇಲ್ಲದೆ ಹೋದರೆ ನಡು ರಸ್ತೆಯಲ್ಲೇ ದಂಡ ಕಕ್ಕಿಸುತ್ತಾರೆ. ಆದರೆ ಸಚಿವ ಮತ್ತು ಶಾಸಕರ ತ್ರಿಬಲ್ ರೈಡಿಂಗ್ಗೆ ಎಸ್ಕಾರ್ಟ್ ಬೇರೆ ಕೊಟ್ಟಿರುವುದು ಪೊಲೀಸರ ವಿರುದ್ಧ ಆಕ್ರೋಶ ಡಬ್ಬಲ್ ಆಗುವಂತೆ ಮಾಡಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಂಚಾರಿ ನಿಯಮ ಉಲ್ಲಂಘಿಸಿದ್ದು, ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದಲಿಂಗೇಗೌಡ ಅವರು ಕುಣಿಗಲ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಮಾತ್ರವಲ್ಲದೆ ಶಾಸಕಾಂಗ ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಪತ್ರ ಕೂಡಾ ಬರೆದಿದ್ದಾರೆ.
ಕಾನೂನು ಉಲ್ಲಂಘಿಸಿರುವುದಕ್ಕೆ ವಿಡಿಯೋ ಸಾಕ್ಷಿಗಳಿವೆ. ಸಚಿವರಿಗೆ ದಂಡ ಹಾಕುವ ತಾಕತ್ತು ಪೊಲೀಸರು ತೋರುತ್ತಾರೆಯೇ ಅನ್ನುವುದು ಈಗಿರುವ ಪ್ರಶ್ನೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲೂ ಜಮೀರ್ ಅಹಮ್ಮದ್ ಹೀಗೆ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿ ಸುದ್ದಿಯಾಗಿದ್ದರು. ಚುನಾವಣಾ ಪ್ರಚಾರದ ಬ್ಯುಸಿಯಾಗಿದ್ದ ಕಾರಣ ಅದು ಸುದ್ದಿಯಾಗಿರಲಿಲ್ಲ.
Discussion about this post