ರಾಜ್ಯ ಸರ್ಕಾರದ ಯಾವುದಾದರೊಂದು ಹುದ್ದೆ ಸಿಕ್ಕರೆ ಸಾಕು, ನಿಗಮ ಮಂಡಳಿಯೋ, ಯಾವುದಾದರೊಂದು ಸಮಿತಿಯಾದರೂ ಪರವಾಗಿಲ್ಲ. ಸರ್ಕಾರ ನೀಡುವ ಒಂದು ರೂಪಾಯಿಯನ್ನು ಬಿಡುವುದಿಲ್ಲ. ಸಿಕ್ಕಷ್ಟು ಸಿಗಲಿ, ಬರುವಷ್ಟು ಬರಲಿ ಎಂದು ಬಾಚಿಕೊಳ್ಳುತ್ತಾರೆ.
ಕಾರು ಸಿಕ್ಕರೆ ಸಾಲದು ಅದಕ್ಕೆ ಇಂಧನ ಬೇಕು, ಡ್ರೈವರ್ ಬೇಕು, ಮನೆ ಸಿಕ್ಕರೆ ಸಾಲದು ಪಿಠೋಪಕರಣ, ಸಿಬ್ಬಂದಿ ಬೇಕು.
ಆದರೆ ಇದಕ್ಕೆಲ್ಲ ಅಪವಾದ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು.ಈ ವರ್ಷದ ಜೂನ್ 21 ರಂದು ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರನ್ನಾಗಿ ಎಂ.ಕೆ. ವೆಂಕಟರಾಮು ಅವರನ್ನು ನೇಮಿಸಿ ಅದೇಶ ಹೊರಡಿಸಲಾಗಿದೆ.
80 ವರ್ಷದ ವೆಂಕಟರಾಮು ಅವರಿಗೆ ರಾಜ್ಯ ಸಚಿವರ ಸ್ಥಾನ ಮಾನ ನೀಡಲಾಗಿದ್ದು, ವೇತನ ಸೇರಿದಂತೆ ಇತರೆ ಭತ್ಯೆಗಳ ಮೊತ್ತ ತಿಂಗಳಿಗೆ 3 ಲಕ್ಷ ದಾಟುತ್ತದೆ.
ಆದರೆ ವೆಂಕಟ ರಾಮು ತಮಗೆ ನೀಡಿದ ಸೌಲಭ್ಯಗಳಲ್ಲಿ ಯಾವುದನ್ನೂ ಪಡೆಯುತ್ತಿಲ್ಲ. ಬದಲಾಗಿ ತಾವು ಸರ್ಕಾರಕ್ಕೆ ಮಾಡುವ ಸೇವೆಗಾಗಿ 101 ರೂಪಾಯಿ ವೇತನ ಪಡೆಯಲು ನಿರ್ಧರಿಸಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅವರು ತಮಗೆ ಸರ್ಕಾರದಿಂದ ನೀಡಿರುವ ಮನೆ ಭತ್ಯೆ, ವೇತನಗಳನ್ನು ಹಿಂತೆಗೆದುಕೊಂಡು ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಠೇವಣಿಯಿಡುವಂತೆ ವಿನಂತಿಸಿದ್ದಾರೆ. ಪ್ರವಾಸ ಮಾಡಿದ ಸಂದರ್ಭಗಳಲ್ಲಿ ಪ್ರವಾಸ ಭತ್ಯೆ ಮತ್ತು ದಿನ ಭತ್ಯೆ ಸ್ವೀಕಾರ ಮಾಡುವುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ.
1962ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಆರಂಭಿಸಿದ ವೆಂಕಟರಾಮು ನಂತರ ನೀರಾವರಿ, ಜಲಸಂಪನ್ಮೂಲ ಇಲಾಖೆಗಳಲ್ಲಿ ಕೆಲಸ ಮಾಡಿ 1993ರಲ್ಲಿ ನಿವೃತ್ತಿ ಪಡೆದರು.
ಹಾಗಾದರೆ ವೆಂಕಟರಾಮು ತ್ಯಾಗ ಮಾಡಿದ್ದು ಯಾಕೆ ಅನ್ನುವುದು ಕುರಿತಂತೆ THE STATE ವೆಬ್ ಸೈಟ್ ಜೊತೆ ಮಾತನಾಡಿ “ ಸರ್ಕಾರ ಪಿಂಚಣಿ ನೀಡುತ್ತಿದೆ. ಇಷ್ಟು ವರ್ಷ ಸರ್ಕಾರದ ಅನ್ನ ತಿಂದಿದ್ದೇನೆ. ಅದನ್ನು ತೀರಿಸಲು ಒಳ್ಳೆ ಅವಕಾಶವಿದು” ಎಂದಿದ್ದಾರೆ.
ಅಂದ ಹಾಗೇ ಇಂತಹುದೊಂದು ಅದ್ಭುತ ಸುದ್ದಿಯನ್ನು ಮೊದಲು ಪ್ರಕಟಿಸಿದ್ದು THE STATE ವೆಬ್ ಸೈಟ್. ಬಳಿಕ ರಾಜ್ಯದ ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸಿದೆ.
Discussion about this post