ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದು ಸ್ಪಷ್ಟವಾಗಿದೆ. ಮೋದಿ ಹೆಸರಲ್ಲಿ ಗೆದ್ದ ಮಂದಿಯೆಲ್ಲಾ ತಾವೆಲ್ಲ ಗೆದ್ದಿರುವುದು ಸ್ವಂತ ಬಲದಿಂದ ಅನ್ನುವ ಭ್ರಮೆ ಸಿಲುಕಿರುವ ಕಾರಣ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೂಡಾ ಇಕ್ಕಟ್ಟಿಗೆ ಸಿಲುಕಿದೆ.
ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ನಾಯಕರ ನಡುವಿನ ಹೊಂದಾಣಿಕೆ ಕೊರತೆಯಿಂದ ಸರ್ಕಾರ ವರ್ಚಸ್ಸಿಗೆ ಧಕ್ಕೆ ಬರಲಾರಂಭಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಬಂಡಾಯ ಫಲದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಬಂಡಾಯವೆದ್ದು ಅನರ್ಹಗೊಂಡ ಶಾಸಕರ ಬಗ್ಗೆ ಕೆಲ ಬಿಜೆಪಿ ನಾಯಕರು ಅಸಡ್ಡೆ ತೋರುತ್ತಿದ್ದಾರೆ. ಇದು ಯಡಿಯೂರಪ್ಪ ಮನಸ್ಸಿಗೆ ಘಾಸಿ ಉಂಟು ಮಾಡಿದ್ದು, ಈ ಸಂಬಂಧ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯವೊಂದರಲ್ಲಿ ತಮ್ಮ ಆಕ್ರೋಶ ಮತ್ತು ನೋವನ್ನು ಹೊರ ಹಾಕಿದ್ದಾರೆ.
ಈ ಸಂಬಂಧ ಪ್ರಜಾವಾಣಿ ಪತ್ರಿಕೆ ವರದಿ ಮಾಡಿದ್ದು, ಯಡಿಯೂರಪ್ಪ ಮಾತನಾಡಿರುವ ಆಡಿಯೋ ತನ್ನ ಬಳಿ ಇದೆ ಅಂದಿದೆ.
ನೀವು ಮಾತನಾಡಿದ ಧಾಟಿ ನೋಡಿದರೆ ಸರ್ಕಾರ ಉಳಿಸುವಂತೆ ಇದೆ ಅಂತ ಅನ್ನಿಸುತ್ತಿಲ್ಲ. 17 ಶಾಸಕರ ರಾಜೀನಾಮೆ ತೀರ್ಮಾನ ನಾನು ತೆಗೆದುಕೊಂಡಿದ್ದಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದೇ ಎರಡೂವರೆ ತಿಂಗಳು ಶಾಸಕರನ್ನು ಮುಂಬೈಯಲ್ಲಿ ಇಟ್ಟಿದ್ದು ನಿಮಗೆಲ್ಲ ಗೊತ್ತಿದೆಯಲ್ಲವೆ’ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
‘ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. 3–4 ಬಾರಿ ಸಿ.ಎಂ ಆಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಉತ್ತಮ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಅಪೇಕ್ಷೆ ಆಗಿತ್ತು. ದೊಡ್ಡತನ, ಧಾರಾಳತನ ನಿಮಗೆ ಇಲ್ಲವಲ್ಲ. ವಾಸ್ತವಿಕ ಸ್ಥಿತಿಯನ್ನು ತಿಳಿದುಕೊಳ್ಳದೇ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತೀರಿ’
ಎರಡು ಕ್ಷೇತ್ರಗಳ (ಅಥಣಿ, ಕಾಗವಾಡ) ಬಗ್ಗೆ ನಿಮ್ಮಿಂದ ಇಂತಹ ಅಭಿಪ್ರಾಯ ನಿರೀಕ್ಷಿಸಿರಲಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿ. ಇಲ್ಲಿ ಹೇಳಿದ ಮಾತು ನಾಲ್ಕು ಗೋಡೆಗಳ ಮಧ್ಯೆ ಇರಲಿ. ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲೂ ಇಲ್ಲ’
‘ನಾನೇ ಅಪರಾಧ ಮಾಡಿದ್ದೇನೆ. ಅವರನ್ನು (17 ಶಾಸಕರು) ನಂಬಿಸಿ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಅಪರಾಧ ಮಾಡಿದ್ದೇನೆ. ಉಪಚುನಾವಣೆಯಲ್ಲಿ ಸೋಲೊ, ಗೆಲುವೊ ಬೇರೆ ಪ್ರಶ್ನೆ. ಆದರೆ, ಯಾರೊಬ್ಬರ ಬಾಯಲ್ಲೂ ಅವರೆಲ್ಲ (ಅನರ್ಹ ಶಾಸಕರು) ತ್ಯಾಗ ಮಾಡಿದ್ದರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಮಾತು ಬರಲಿಲ್ಲ’
‘ಅವರು ಮೂರ್ಖರು, ಹುಚ್ಚರು. ನಮ್ಮನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅವರಿಗೆ ಆ ಅಗತ್ಯವಾದರೂ ಏನಿತ್ತು? ಎರಡು– ಮೂರು ತಿಂಗಳು ಮುಂಬೈನಲ್ಲಿ ಇದ್ದರು. ಕ್ಷೇತ್ರಗಳತ್ತ ಮುಖ ಮಾಡಲಿಲ್ಲ. ಹೆಂಡತಿ, ಮಕ್ಕಳ ಮುಖವನ್ನೂ ನೋಡಲಿಲ್ಲ. ಅದೆಲ್ಲ ನಿಮಗೆ ಗೊತ್ತಿರುವುದೇ’
‘ರಾಜೀನಾಮೆ ಕೊಟ್ಟು ಬಂದವರು ಮೂರ್ಖರಾ? ಇಲ್ಲಿ ನಿಂತು ಉಪದೇಶ, ಭಾಷಣ ಮಾಡುತ್ತೀರಿ. ನೀವು ಅವರ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ. ನಾನು ಮಾತನಾಡಿದ್ದು ಸುದ್ದಿ ಮಾಡಿಸುತ್ತೀರಿ ಎಂಬುದೂ ಗೊತ್ತಿದೆ’
ಯಾರನ್ನು ತೃಪ್ತಿ ಪಡಿಸಲು ಹೀಗೆಲ್ಲ ಮಾಡುತ್ತಿದ್ದೀರಿ. ನಾನೂ ಪಕ್ಷದ ಅಧ್ಯಕ್ಷನಾಗಿದ್ದೆ. ಎಲ್ಲೂ ಅಸಹಕಾರ ತೋರಿಸಿರಲಿಲ್ಲ. ನಿಮ್ಮೆಲ್ಲರಿಂದ ನೋವು ನಿರೀಕ್ಷೆ ಮಾಡಿರಲಿಲ್ಲ.
ಲಕ್ಷ್ಮಣ ಸವದಿ ಕ್ಷೇತ್ರದ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ನಿಮ್ಮ ಬಾಯಲ್ಲಿ ರಾಜು ಕಾಗೆ ಹೆಸರು ಬಂದಿದೆ. ಕಾಗವಾಡದಲ್ಲಿ ಕಾಗೆ 30 ಸಾವಿರಕ್ಕೂ ಹೆಚ್ಚು ಓಟುಗಳಿಂದ ಸೋತಿಲ್ಲವೆ… ನೀವೆಲ್ಲ ಮಾತನಾಡಿದ್ದು ಎಷ್ಟರ ಮಟ್ಟಿಗೆ ಸರಿ.
ಮಂತ್ರಿಗಳು, ಕೇಂದ್ರ ಮಂತ್ರಿಗಳ ಅಭಿಪ್ರಾಯ ಏನಿದೆ ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಈ ಸಭೆಗೆ ಬರಬಾರದಾಗಿತ್ತು. ಬಂದು ತಪ್ಪು ಮಾಡಿದೆ.
ಇವೆಲ್ಲವೂ ಯಡಿಯೂರಪ್ಪ ಅವರ ಮಾತುಗಳು, ಆದರೆ ಇದನ್ನು ಯಾರನ್ನೂ ಉದ್ದೇಶಿಸಿ ಹೇಳಿದ್ದಾರೆ ಅನ್ನುವುದು ಗೊತ್ತಾಗಿಲ್ಲ. ಹಾಗೇ ನೋಡಿದರೆ ಯಡಿಯೂರಪ್ಪ ಮಾತಿನಲ್ಲಿ ಸತ್ಯಾಂಶವಿದೆ. ಮೋದಿ ಮುಖ ನೋಡಿ ಜನ ಬಿಜೆಪಿ ಮತ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರನ್ನು ಜನ ಆಗ ತಿರಸ್ಕರಿಸಿದ್ದರು. ಆದರೆ ರಾಜಕೀಯ ಆಟದಲ್ಲಿ ಮೈತ್ರಿ ಸರ್ಕಾರ ರಚನೆಯಾಯ್ತು. ಇದೀಗ ಮತ್ತೆ ಸಿಕ್ಕ ಅವಕಾಶವನ್ನಾದರೂ ಬಿಜೆಪಿ ನಾಯಕರು ಬಳಸಿಕೊಳ್ಳುತ್ತಿದ್ದಾರೆಯೇ ಇಲ್ಲ.
ಬಿಜೆಪಿಯ ಬಹುತೇಕ ಸಚಿವರು ಶಾಸಕರಿಗೆ ತಮ್ಮನ್ನು ತಾವು ಬಲಪಡಿಸಿಕೊಳ್ಳುವುದು ಹೇಗೆ ಅನ್ನುವುದೇ ಚಿಂತೆಯಾಗಿದೆ ಹೊರತು ಪಕ್ಷವನ್ನು ಬಲಗೊಳಿಸುವುದು ಹೇಗೆ ಅನ್ನುವುದರ ಚಿಂತೆ ಇಲ್ಲ. ಮುಂದೆ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಬಕ್ರ ಮಾಡೋಣ ಎಂದು ನಿರ್ಧರಿಸಿದಂತಿದೆ.
Discussion about this post