ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಈ ಮಟ್ಟಿಗೆ ಉಲ್ಭಣಗೊಂಡಿದೆ ಅಂದ್ರೆ ಅದಕ್ಕೆ ರಾಜ್ಯ ಸರ್ಕಾರದ ತಪ್ಪು ಹೆಜ್ಜೆಗಳು ಅನ್ನುವುದರಲ್ಲಿ ಎರಡು ಮಾತಿಲ್ಲ. ಕನಿಷ್ಟ ಪಕ್ಷ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೊಟ್ಟ ಅನುಕೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ರೆ 6 ಆಕ್ಸಿಜನ್ ಪ್ಲಾಂಟ್ ಗಳು ಕಾರ್ಯಾರಂಭ ಮಾಡುತ್ತಿತ್ತು. ಆದರೆ ರಾಜ್ಯ ಸರ್ಕಾರದ ಉಡಾಫೆಯ ಕಾರಣದಿಂದ ಕೇವಲ 2 ಪ್ಲಾಂಟ್ ಗಳು ಮಾತ್ರ ಪ್ರಾರಂಭಗೊಂಡಿದೆ. ಒಂದು ವೇಳೆ ಪಿಎಂ ಕೇರ್ ಫಂಡ್ ನಿಂದ ಬಿಡುಗಡೆಯಾದ ಹಣವನ್ನು ಪಡೆಯುವ ನಿಟ್ಟಿನಲ್ಲಿ ಸೂಕ್ತ ಕಡತಗಳನ್ನು ಸಲ್ಲಿಸಿದ್ರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಇಲ್ಲ ಎಲ್ಲವೂ ಸರಿ ಇದೆ ಅನ್ನುವುದು ರಾಜ್ಯ ಸರ್ಕಾರದ ವಾದವಾಗಿದ್ರೆ, ಜನವರಿಯಲ್ಲಿ ಘೋಷಣೆಯಾದ 6 ಆಕ್ಸಿಜನ್ ಘಟಕಗಳು ಮೇ ಪ್ರಾರಂಭವಾದರೂ ಪ್ರಾರಂಭವಾಗಿಲ್ಲ ಯಾಕೆ ಅನ್ನುವುದನ್ನು ರಾಜ್ಯದ ಜನತೆಗೆ ವಿವರಿಸಲಿ.
ಈ ನಡುವೆ ರಾಜ್ಯ ಸಂಕಷ್ಟದಲ್ಲಿದ್ದರೂ ಎಂದಿನಂತೆ ಪ್ರಚಾರದ ತೆವಳಿಗೆ ಬಿದ್ದ ರಾಜ್ಯ ಸರ್ಕಾರ ವಯಸ್ಕರಿಗೆ ಲಸಿಕೆ ಕೊಡುವ ವಿಚಾರದಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿದೆ. ದೇಶದಲ್ಲೇ ಲಸಿಕೆಯ ಕೊರತೆ ಇದೆ, 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಲು ಆರೋಗ್ಯ ಕೇಂದ್ರಗಳು ಪರದಾಡುತ್ತಿದೆ. ಇನ್ನು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡುವುದಾದರೂ ಎಲ್ಲಿಂದ ಅನ್ನುವ ಪರಿಸ್ಥಿತಿ ಇದ್ದಾಗ್ಯೂ ರಾಜ್ಯದ ಸಿಎಂ ಯಡಿಯೂರಪ್ಪ ಸಾಂಕೇತಕವಾಗಿ ವಯಸ್ಕರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ನಾಲ್ಕೈದು ಮಂದಿಯನ್ನು ಕರೆಸಿ ಲಸಿಕೆ ಚುಚ್ಚಿಸಿಕೊಂಡಿರುವ ಫೋಟೋ ಗೆ ಪೋಸು ಕೊಟ್ಟಿರುವ ಸಿಎಂ ಯಡಿಯೂರಪ್ಪ ಮೋದಿ ಮುಂದೆ ಬೀಗಲು ಹೊರಟಿದ್ದಾರೆ.
ಯಡಿಯೂರಪ್ಪ ಅವರಿಗೆ ಪ್ರಚಾರ ಪಡೆಯುವ ಕಲೆ ಗೊತ್ತಿದೆ. ಅದಕ್ಕಾಗಿಯೇ ರಾಜ್ಯದ ಬೊಕ್ಕಸ ಸಂಕಷ್ಟದಲ್ಲಿದ್ದರೂ ಪೇಪರ್ ಗಳಿಗೆ ಫ್ರಂಟ್ ಪೇಜ್ ಜಾಹೀರಾತು ಕೊಟ್ಟು ಅವುಗಳ ಬಾಯಿ ಮುಚ್ಚಿಸಿದ್ದರು.
ಇನ್ನು ಲಸಿಕೆಯ ಸಾಂಕೇತಿಕ ಉದ್ಘಾಟನೆ ವಿಚಾರಕ್ಕೆ ಬರುವುದಾದ್ರೆ, ರಾಜಕಾರಣಿಗಳಿಗೆ ಶಂಕುಸ್ಥಾಪನೆ, ಗುದ್ದಲಿ ಪೂಜೆ, ಕಾಮಗಾರಿ ಉದ್ಘಾಟನೆ, ಫಲಕ ಅನಾವರಣ ಇವೆಲ್ಲವೂ ಮಾಮೂಲಿ. ಅದ್ಯಾವುದೋ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಪ್ರಾರಂಭವಾಗುವ ಹೊತ್ತಿಗೆ ಅದೆಷ್ಟೋ ಕಾಲ ಸರಿದು ಹೋಗಿರುತ್ತದೆ. ಲಸಿಕೆ ಹಂಚಿಕೆಯನ್ನೂ ಯಡಿಯೂರಪ್ಪ ಹಾಗೇ ಅಂದುಕೊಂಡಿರುವಂತಿದೆ. ಒಟ್ಟಿನಲ್ಲಿ ಲಸಿಕೆ ವಿಚಾರದಲ್ಲೂ ಮಕ್ಕಳಾಟ ಆಡಲು ಹೊರಟಿರುವ ನಿಮಗೊಂದು ಧಿಕ್ಕಾರವಿರಲಿ. ಹೊಟ್ಟೆಗೆ ಹಿಟ್ಟಿಲ್ಲದಿದ್ರೂ, ಜುಟ್ಟಿಗೆ ಮಲ್ಲಿಗೆ ಅನ್ನುವ ನಿಮ್ಮ ಪರಿಸ್ಥಿತಿಗೆ ಧಿಕ್ಕಾರವಿರಲಿ,
Discussion about this post