ಸಾಕಷ್ಟು ಪ್ರಯತ್ನದ ನಂತರ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಪಟ್ಟಕೇರಿದ್ದಾರೆ. ಆದರೆ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಘಳಿಗೆ ಕುರಿತಂತೆ ವಿವಾದವೆದ್ದಿದೆ.
ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿ ಮಾಡಿದ್ದು ಜ್ಯೋತಿಷಿಗಳೇ ಆಗಿದ್ದರೂ, ಈ ಮುಹೂರ್ತ ಅವರಿಗೆ ಗಂಡಾಂತರ ತಂದೊಡ್ಡಲಿದೆ ಎಂದು ಕೆಲ ಜ್ಯೋತಿಷಿಗಳು ಚಕಾರವೆತ್ತಿದ್ದಾರೆ.
ಈ ಸಂಬಂಧ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಖ್ಯಾತ ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯ ಮುಂದಾಗಬಹುದಾದ ಅನಾಹುತಗಳ ಕುರಿತಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ಶುಕ್ರವಾರ ಈ ಕುರಿತಂತೆ ಪೋಸ್ಟ್ ಮಾಡಿರುವ ಕಬಿಯಾಡಿ “ಇವತ್ತು ಯಡ್ಯೂರಪ್ಪ ನವರಿಗೆ ಸಂಜೆ 6.30ಕ್ಕೆ ಪ್ರಮಾಣ ವಚನ ಮಾಡಲು ಹೇಳಿದ ಜ್ಯೋತಿಷಿ ಬಗ್ಗೆ ಕನಿಕರವಿದೆ.ಅವರ ಶಾಸ್ತ್ರ ಜ್ಞಾನದ ಬಗ್ಗೆ ಚಿಂತೆಯಿದೆ.
ಇಂದು ಬೆಂಗಳೂರಿಗನ್ವಯಿಸಿ ಸಂಜೆ 6.08 ಘಂಟೆಯಿಂದ ಚರವಾದ ಮಕರ ಲಗ್ನ. ಭರಣಿ ನಿತ್ಯ ನಕ್ಷತ್ರ. ಯಾವ ಶುಭ ಕಾರ್ಯಕ್ಕೂ ವಿಹಿತವಲ್ಲದ ನಕ್ಷತ್ರ,ಗಂಡವೆಂಬ ಅಶುಭ ಯೋಗದ ದಿನ, ಗರಿಜ ವೆಂಬ ಮಧ್ಯಮ ಫಲದಾಯಕ ಕರಣದ ದಿನ.
ಮಕರಲಗ್ನ ಚರ ಲಗ್ನ,ಲಗ್ನಾಧಿಪತಿ ಶನಿ ಕೇತುವಿನೊಂದಿಗೆ ದ್ವಾದಶದಲ್ಲಿರುವುದು,ಸಪ್ತಮದಲ್ಲಿ ಪಾಪಿಗ್ರಹರಾದ ರವಿ,ಕುಜ,ಹಾಗೂ ಅವರೊಂದಿಗೆ ಸೇರಿ ಪಾಪಿಯಾದ ಬುಧ ಹಾಗೂ ಶುಕ್ರನಿರುವುದು,ಚಂದ್ರ ಚತುರ್ಥದಲ್ಲಿರುವುದು.
ಅಷ್ಟಮದಲ್ಲಿ ಮಾಂದಿಯಿರುವುದು,ಇವೆಲ್ಲ ತೀರ ಅಶುಭದಾಯಕವಾಗಿ ನಿತ್ಯ ಅಭದ್ರತೆ,ಸ್ವಜನರಿಂದ ಕಿರಿಕಿರಿ.ಶತ್ರು ಪ್ರಾಬಲ್ಯ,ಮಾನಸಿಕ ಕಿರಿಕಿರಿ,ಅನಾರೋಗ್ಯದ ತೊಂದರೆ,ವರಿಷ್ಠರ ಬೆಂಬಲದ ಕೊರತೆ,ಆಂತರಿಕ ಬಾಹ್ಯ ಭಿನ್ನಾಭಿಪ್ರಾಯ,ಅಕಾಲಿಕ ಸ್ಥಾನ ಚ್ಯುತಿ ಮೊದಲಾದ ಸರ್ವ ರಗಳೆಗಳು ಬರಬಹುದಾದ 9ರಲ್ಲಿ 7 ಗ್ರಹರು ಹಾಗೂ ಮಾಂದಿ ಅಶುಭಸ್ಥಾನದಲ್ಲಿರುವ ಚರಲಗ್ನದ ಹೊತ್ತನ್ನು ಏಕಾದಶದಲ್ಲಿ ಗುರು ಗ್ರಹನೊಬ್ಬ ಅನುಕೂಲನಾಗಿದ್ದಾನೆ ಎಂಬ ಕಾರಣದೊಂದಿಗೆ( ಷಷ್ಠದ ರಾಹು ರೋಗಾದಿ ತೊಂದರೆಗಳನ್ನು ಕೊಡಬಲ್ಲನಾದುದರಿಂದ ಅವನೂ ಬಹಳ ಶುಭನೇನೂ ಅಲ್ಲ.) ಪ್ರಮಾಣವಚನಕ್ಕೆ ಮುಹೂರ್ತವಾಗಿ ನೀಡಿರುವ ಪುಣ್ಯಾತ್ಮ ಯಡ್ಯೂರಪ್ಪನ ಹಿತಚಿಂತಕನಂತೂ ಅಲ್ಲ.
ಅದರ ಹಿಂದಿನ ಧನೂಲಗ್ನ ಅದಕ್ಕಿಂತಲೂ ಅಪಾಯಕಾರಿ. ಹಾಗಾಗಿ ಬಿಜೆಪಿ,ಹಾಗೂ ನರೇಂದ್ರ ಮೋದಿ ಅಭಿಮಾನಿಗಳಾದ ನಾವೆಲ್ಲ ಯಡ್ಯೂರಪ್ಪನವರ ಸರಕಾರ ಸ್ಥಿರವಾಗಿ ಯಶಸ್ವಿಯಾಗಿರಲು ಈ ಮುಹೂರ್ತ ದೋಷದಿಂದ ಅವರನ್ನು ರಕ್ಷಿಸಿರಿ ದೇವರೇ ಎಂದು “ಕಲೌ ದುರ್ಗಾ ವಿನಾಯಕೌ” ಎಂಬಂತೆ ಕಲಿಯುಗದಲ್ಲಿ ಕ್ಷಿಪ್ರ ಅನುಗ್ರಹ ದಾಯಕರಾದ ಗಣಪತಿ ದುರ್ಗೆಯರನ್ನು ,ನಮ್ಮ ಇಷ್ಟ ದೇವರುಗಳನ್ನು ಹಾಗೂ ನವಗ್ರಹರನ್ನು ನಿತ್ಯ ಪ್ರಾರ್ಥಿಸೋಣ.” ಅಂದಿದ್ದಾರೆ.
ಪ್ರಮಾಣ ವಚನದ ಮುಹೂರ್ತ ಕಾರಣದಿಂದ , ನಿಷ್ಟೆಯಿಂದ ಆಡಳಿತ ನಡೆಸಲು ಕಷ್ಟ,ತಪ್ಪು ಧೋರಣೆಗಳಿಂದ ಸಂಕಷ್ಟ,ಸ್ವಜನ ಮತ್ತು ಸ್ವಪಕ್ಷೀಯರು ಮತ್ತು ಹೈಕಮಾಂಡ್ ನಿಂದ ರಗಳೆ ಅನ್ನುವುದಾದರೆ ಅಭಿಮಾನಗಳ ಕಟ್ಟು ಬೀಳುವ ಅಗತ್ಯವೇನಿದೆ. ರಾಜ್ಯಕ್ಕೆ ಬೇಕಿರುವ ಒಳ್ಳೆಯ ಆಡಳಿತಗಾರ ತಾನೇ.
Discussion about this post