ಪ್ರತಿ ಮಹಿಳೆಯರ ಜೀವನದಲ್ಲಿ ಗರ್ಭಾವಸ್ಥೆ ಒಂದು ಸುಂದರ ಪಯಣವಾಗಿರುತ್ತದೆ. ಆದರೆ ಇದೇ ಸಂದರ್ಭದಲ್ಲಿ ಅವರಿಗೆ ತಮ್ಮ ಜೀವನವನ್ನು ಸರಳವಾಗಿಸಬಹುದಾದ ಸಮರ್ಥ ವೈದ್ಯರ ಗಮನ, ಅತ್ಯಾಧುನಿಕ ಮೂಲ ಸೌಕರ್ಯ ಮತ್ತು ನವೀನ ತಂತ್ರಜ್ಞಾನದ ಅಗತ್ಯವೂ ಇರುತ್ತದೆ. ಈ ನಿಟ್ಟಿನಲ್ಲಿ ಇಂದು ಉದ್ಘಾಟನೆಗೊಂಡ ಕೆಎಂಸಿಯ ಈ ನೂತನ ಕೇಂದ್ರವು ಗಮನಾರ್ಹ ಪರಿಣಾಮವನ್ನು ಉಂಟು ಮಾಡಲಿದೆ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಕುಂದ್ರಾ ಹೇಳಿದರು.
ಅವರು ಗುರುವಾರದಂದು ನಗರದ ಟಿ.ಎಂ.ಪೈ.ಸಭಾಂಗಣದಲ್ಲಿ ಕೆಎಂಸಿ ಆಸ್ಪತ್ರೆಯ ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕೆಎಂಸಿಯ ಈ ನೂತನ ಕೇಂದ್ರವು ಜಿಲ್ಲೆಯ ಮಹಿಳೆಯರಿಗೆ ಆರೋಗ್ಯ ಶುಶ್ರೂಷೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಶಿಲ್ಪಾ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಕಟೀಲು ದೇವಸ್ಥಾನ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ದೇವಳದ ವತಿಯಿಂದ ದೇವರ ಶೇಷವಸ್ತ್ರ ನೀಡಿ ಗೌರವಿಸಿದರು.
12 ವರ್ಷಗಳ ಹಿಂದೆ ದೇವಳದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ಮುಂಬೈ ಸಮಿತಿಯವರು ನೀಡಿದ್ದ ಚಿನ್ನದ ಕಲಶ (ಕೊಡಪಾನ)ದಲ್ಲಿ ಶಿಲ್ಪ ಶೆಟ್ಟಿಯವರ ಹೆಸರಿದ್ದು ಅದನ್ನು ಅವರಿಗೆ ತೋರಿಸಲಾಯಿತು. ಇದನ್ನು ನೋಡಿ ಶಿಲ್ಪಾ ಅವರು ಸಂತೋಷಪಟ್ಟು ಸಾಧ್ಯವಾದರೆ ಜನವರಿಯಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಬರುವುದಾಗಿ ತಿಳಿಸಿದರು.
Discussion about this post