ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಒಂದಿಷ್ಟು ದಿನ ಕಡಿಮೆಯಾಗಿತ್ತು. ಇದೀಗ ಕೇರಳದಲ್ಲಿ ಕೊರೋನಾ ಸೋಂಕು ನಿಯಂತ್ರಣ ತಪ್ಪಿದ ಕಾರಣ ಕರ್ನಾಟಕಕ್ಕೆ ಕಂಟಕ ಶುರುವಾಗಿದೆ. ಗಡಿ ಭಾಗದಲ್ಲಿ ಕರ್ನಾಟಕ ನಿರ್ಲಕ್ಷ್ಯ ವಹಿಸಿದ ಕಾರಣ ಇದೀಗ ಕರುನಾಡಿನಲ್ಲೂ ಸೋಂಕಿನ ಪ್ರಮಾಣ ಏರತೊಡಗಿದೆ.
ಈ ನಡುವೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕಾಟ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಕಳೆದೊಂದು ತಿಂಗಳಲ್ಲಿ 425 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, 73 ಮಂದಿ ಮೃತಪಟ್ಟಿದ್ದಾರೆ. ಇದೀಗ ರಾಜ್ಯದಲ್ಲಿ ಒಟ್ಟು 3669 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಮೃತರ ಸಂಖ್ಯೆ 341ಕ್ಕೆ ಏರಿದೆ.
ಇನ್ನು ಬ್ಲ್ಯಾಕ್ ಫಂಗಸ್ ಗೆ ಸೂಕ್ತ ಮೆಡಿಸಿನ್ ಸಿಗುತ್ತಿಲ್ಲ ಎನ್ನಲಾಗಿದೆ. ರಾಜ್ಯ ಸರ್ಕಾರ ಕೇಳಿದ್ರೆ ಕರುನಾಡಿನಲ್ಲಿ ಲಸಿಕೆ ಲಭ್ಯ, ಬ್ಲ್ಯಾಕ್ ಫಂಗಸ್ ಗೆ ಮದ್ದು ಲಭ್ಯ ಎಂದು ಹೇಳಿದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿಯೇ ಬೇರೆ. ಎರಡನೇ ಅಲೆಯ ಸಂದರ್ಭದಲ್ಲೂ ಬೆಡ್ ಇದೆ, ಆಕ್ಸಿಜನ್ ಇದೆ ಅಂದ ಸರ್ಕಾರ ಮಾಡಿದ್ದೇನು ಅನ್ನುವುದನ್ನು ದೇಶ ಮರೆಯುವಂತಿಲ್ಲ.
ಇದೀಗ ಮೂರನೇ ಅಲೆಯ ಆತಂಕ ಶುರುವಾಗಿದ್ದು, ಇದು ಡೆಲ್ಟಾ ಅಲೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಲಸಿಕೆ ಪಡೆದವರಿಗೂ ಡೆಲ್ಟಾ ತಗುಲುವ ಅಪಾಯವಿರುವುದರಿಂದ ಎರಡನೆ ಅಲೆಯ ಭೀಕರತೆ ಉದ್ಭವವಾಗುತ್ತದೆಯೇ ಅನ್ನುವ ಭಯ ಕಾಡುತ್ತಿದೆ.
Discussion about this post