ಬೆಂಗಳೂರು : ರಾಜ್ಯದಲ್ಲಿ ಅದ್ಯಾವ ಸರ್ಕಾರವೇ ಅಧಿಕಾರಕ್ಕೆ ಬರಲಿ, ಶ್ರೀಮಂತರು, ಸೆಲೆಬ್ರೆಟಿಗಳು ರಾಜಕಾರಣಿಗಳು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ರೆ ತೆರವು ಮಾಡೋದೆ ಇಲ್ಲ.
ಅದೇ ಬಡವರೇನಾದ್ರೂ ಒತ್ತುವರಿ ಮಾಡಿಕೊಂಡ್ರೆ ಪೊಲೀಸರು ಬರೋದೇನು, ಕಂದಾಯ ಇಲಾಖೆ ಅಧಿಕಾರಿಗಳ ನೋಟಿಸ್ ಏನು, ಜೆಸಿಬಿಗಳ ಘರ್ಜನೆಯೇನು.
ಇದಕ್ಕೊಂದು ಬೆಸ್ಟ್ ಏಕ್ಸಾಂಪಲ್ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಂ. ಕೃಷ್ಣಪ್ಪ ಅವರು ಮಾಡಿದ್ದಾರೆ ಎನ್ನಲಾದ ಒತ್ತುವರಿ ಬಗೆಗಿನ ಸರ್ಕಾರದ ನಿರ್ಲಕ್ಷ್ಯ.
ಭೂಮಾಪನ ಇಲಾಖೆ ಸಾಕಷ್ಟು ತಿಂಗಳ ಹಿಂದೆ ಕೃಷ್ಣಪ್ಪ ಅವರಿಗೆ ಸೇರಿದೆ ಎನ್ನಲಾದ ರೈನೋ ಹೋಟೆಲ್ ನಿರ್ಮಾಣಕ್ಕಾಗಿ 1 ಎಕರೆ 9 ಗುಂಟೆ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಹೇಳಿತ್ತು. ಆದರೆ ಒತ್ತುವರಿ ತೆರವು ಮಾಡಲು ಸರ್ಕಾರ ಈವರೆಗೆ ಮನಸ್ಸು ಮಾಡಿಲ್ಲ.
ಈ ನಡುವೆ ಮಾರ್ಚ್ 17ರವರೆಗೆ ಈ ಒತ್ತುವರಿ ತೆರುವುಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕನಿಷ್ಟ ಹೈಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸುತ್ತಾ ಅಥವಾ ಮತ್ತೆ ಕಾನೂನು ಹೋರಾಟದ ನೆಪವೊಡ್ಡಿ ಮುಂದೂಡುತ್ತಾ ನೋಡಬೇಕು.
ನಗರದ ಪ್ರಜಾ ಹಕ್ಕುಗಳ ವೇದಿಕೆ ಸಲ್ಲಿಸಿರುವ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ಸಂದರ್ಭದಲ್ಲಿ ಸರ್ಕಾರಿ ಪರ ವಕೀಲರು ಉತ್ತರ ಹಳ್ಳಿ ಕೆರೆಯ 1 ಎಕರೆ 9 ಗುಂಟೆ ಭೂಮಿ ಒತ್ತುವರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಜೊತೆಗೆ ಸರ್ವೇ ವರದಿ ಪ್ರಕಾರ ಹೋಟೆಲ್ ಕಟ್ಟಡ, ರಸ್ತೆ. ಪಾರ್ಕ್ ಇದೇ ಒತ್ತುವರಿ ಭೂಮಿಯಲ್ಲೇ ನಿರ್ಮಾಣವಾಗಿದೆ ಎಂದು ವಕೀಲರು ಹೇಳಿದ್ದಾರೆ.
Discussion about this post