ಬೆಂಗಳೂರು : 7 ವರ್ಷಗಳ ಹಿಂದೆ ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಎಂಬವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮಧುಕರ್ ರೆಡ್ಡಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸತತ 3 ವರ್ಷಗಳ ವಿಚಾರಣೆ ಬಳಿಕ 65ನೇ ಸಿಸಿಎಚ್ ಕೋರ್ಟ್ ಮಧುಕರ್ ರೆಡ್ಡಿ ಅಪರಾಧಿ ಎಂದು ನಿನ್ನೆ ನ್ಯಾಯಾಲಯ ಘೋಷಿಸಿತ್ತು.
ಇಂದು ಆತನಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಿದೆ.
2013ರ ನ. 19 ರಂದು ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್ನಲ್ಲಿದ್ದ ಎಟಿಎಂನಲ್ಲಿ ಈ ದುರ್ಘಟನೆ ನಡೆದಿತ್ತು.
ಅಂದು ಹಣ ಡ್ರಾ ಮಾಡಲು ಜ್ಯೋತಿ ಉದಯ್ ಅವರು ಎಟಿಎಂ ಒಳಗಿದ್ದ ವೇಳೆ ಎಟಿಎಂನ ಶೆಲ್ಟರ್ ಎಳೆದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಬಳಿಕ ಆರೋಪಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಧುಕರ್ ರೆಡ್ಡಿಗಾಗಿ ಕರ್ನಾಟಕ, ಆಂಧ್ರ ಸೇರಿ ದೇಶದ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದರು, ಆರೋಪಿ ಪತ್ತೆಗಾಗಿ ಮಾಹಿತಿ ನೀಡಿದವರಿಗೆ 12 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಆರೋಪಿ ಮಾತ್ರ ಸಿಕ್ಕಿರಲಿಲ್ಲ.
ಹೀಗಾಗಿ 2016ರಲ್ಲಿ ನ್ಯಾಯಾಲಯಕ್ಕೆ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದರು. ಅದೃಷ್ಟ ಅನ್ನುವಂತೆ 2017ರಲ್ಲಿ ಕೊಲೆ ಕೇಸ್ ಸಂಬಂಧ ಮಧುಕರ್ ರೆಡ್ಡಿಯನ್ನು ಬಂಧಿಸಲಾಗಿತ್ತು.
ಆಂಧ್ರ ಪ್ರದೇಶದ ಮದನಪಲ್ಲಿ ಪೊಲೀಸರು ರೆಡ್ಡಿಯನ್ನು ಬಂಧಿಸಿದ್ದ ಬಳಿಕ ಬಾಡಿ ವಾರೆಂಟ್ ಮೇಲೆ ಬೆಂಗಳೂರು ಪೊಲೀಸರು ಮಧುಕರ್ ರೆಡ್ಡಿಯನ್ನು ಕರೆ ತಂದಿದ್ದರು.
ಇದಾದ ನಂತರ ಮತ್ತೆ 2017ರ ಮೇ 8 ರಲ್ಲಿ ಎಸ್ ಜೆ ಪಾರ್ಕ್ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದರು. ಸತತ ಮೂರು ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆ ಶಿಕ್ಷೆ ಪ್ರಕಟಗೊಳ್ಳುವುದರೊಂದಿಗೆ ಮುಕ್ತಾಯಗೊಂಡಿದೆ.
Discussion about this post