ಉಳಿದವರು ಕಂಡಂತೆ ಚಿತ್ರದ ನಿರ್ದೇಶಿಸಿ ಸೈ ಎನಿಸಿಕೊಂಡ ನಟ ರಕ್ಷಿತ್ ಮತ್ತೊಂದು ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಬರಲು ಸಜ್ಜಾಗಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಈಗ ‘ಅವನೇ ಶ್ರೀಮನ್ನಾರಾಯಣ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರಕ್ಷಿತ್ ರ ಬಹು ನಿರೀಕ್ಷಿತ ಚಿತ್ರವಾಗಿರುವ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಪ್ರಾರಂಭವಾದಾಗಿನಿಂದ ಗಮನ ಸೆಳೆದಿರುವ ಚಿತ್ರವು ಪೋಸ್ಟರ್ ಮೂಲಕ ಗಮನ ಸೆಳೆದಿದೆ.
ಈ ಹಿಂದಿನ ಚಿತ್ರಗಳಿಗಿಂತ ಭಿನ್ನ ಮ್ಯಾನರಿಸಂನಲ್ಲಿ ರಕ್ಷಿತ್ ಕಾಣಿಸಲಿದ್ದಾರೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸುವ ಮೂಲಕ ರಕ್ಷಿತ್ ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ.
ಶ್ರೀಮನ್ನಾರಾಯಣ ಈ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ 27 ರಂದು ಬಹುಭಾಷೆಗಳಲ್ಲಿ ಕರ್ನಾಟಕ ಸೇರಿ ಇತರ ರಾಜ್ಯಗಳಲ್ಲಿಯೂ ತೆರೆ ಕಾಣಲಿದೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಡಿ.27 ರಂದು ಕಿರಿಕ್ ಪಾರ್ಟಿ ಚಿತ್ರವು ಬಿಡುಗಡೆಯಾಗಿ ನಾಲ್ಕು ವರ್ಷಗಳಾಗುತ್ತವೆ.ಈ ಸಂಭ್ರವನ್ನೂ ಇದೇ ದಿನ ಆಚರಿಸಲಾಗುತ್ತದೆ ಎಂದು ರಕ್ಷಿತ್ ಹೇಳಿದ್ದಾರೆ.
ಚಿತ್ರವು ಹಲವು ವಿಶೇಷಗಳಿಂದ ಕೂಡಿದೆ. ಚಿತ್ರವು ಬಹುಭಾಷೆಯಲ್ಲಿ ನಿರ್ಮಾಣವಾಗಿದೆ. ತೆಲುಗು ಅವತರಣಿಕೆಯ ಚಿತ್ರಕ್ಕೆ ಟಾಲಿವುಡ್ ನ ಖ್ಯಾತ ನಾಮ ಚಿತ್ರ ಸಾಹಿತಿಯಾದ ರಾಮಜೋಗಯ್ಯ ಶಾಸ್ತ್ರಿ ಗೀತ ರಚನೆ ಮಾಡಿದ್ದಾರೆ. ಇವರು ಈ ಮುನ್ನ ದರ್ಶನ್ ರ ಕುರುಕ್ಷೇತ್ರ ಮತ್ತು ಸುದೀಪ್ ರ ಪೂಲ್ವಾನ್ ಚಿತ್ರದ ತೆಲುಗು ಅವತರಣಿಕೆಯ ಚಿತ್ರಗಳಿಗೂ ರಾಮಜೋಗಯ್ಯ ಲೇಖನಿ ಹಿಡಿದಿದ್ದರು.
ಶ್ರೀಮನ್ನಾರಾಯಣ ಚಿತ್ರತಂಡವು ಅ.1 ರಿಂದಲೇ ಅಧಿಕೃತವಾಗಿ ಚಿತ್ರಕ್ಕೆ ಪ್ರಮೋಷನ್ ಕಾರ್ಯ ಆರಂಭಿಸಿದೆ. ನಿರ್ಮಾಪಕ ಮಲ್ಲಿಕಾರ್ಜುನಯ್ಯ ಹಲವು ನಿರ್ಮಾಣ ಸಂಸ್ಥೆಗಳೊಂದಿಗೆ ಚಿತ್ರ ಹಂಚಿಕೆಯ ಕುರಿತಂತೆ ಮಾತುಕತೆ ನಡೆಸಿದ್ದಾರೆ.

ಚಿತ್ರದ ಇತರೆ ಭಾಷೆಗಳ ಡಬ್ಬಿಂಗ್ ಕಾರ್ಯವು ಪ್ರಗತಿಯಲ್ಲಿದೆ. ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ತೆಲುಗಿನಲ್ಲೂ ಪೂರ್ಣಗೊಳ್ಳುವ ಹಂತದಲ್ಲಿದೆ. ಹಿಂದಿ ಭಾಷೆಯಲ್ಲಿ ಆರಂಭವಾಗಿದೆ.
ಸಚಿನ್ ರವಿ ಮೊದಲ ಬಾರಿಗೆ ಶ್ರೀಮನ್ನಾರಾಯಣನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮನ್ನಾರಾಯಣ ಚಿತ್ರಕ್ಕೆ ಪುಷ್ಕರ ಮಲ್ಲಿಖಾರ್ಜುನಯ್ಯ ಮತ್ತು ಎ ಕೆ ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ರಾಗ ಸಂಗೀತ ನೀಡಿದ್ದಾರೆ.
ಶ್ರೀಮನ್ನಾರಾಯಣ ನವಿರು ಪ್ರೇಮ ಮತ್ತು ಹಾಸ್ಯ ಮಿಶ್ರಿ ಕಥೆಯಾಗಿದೆ. ಕರ್ಮ್ ಚಾವ್ಲಾ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.
ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ತಾರಾಗಣದಲ್ಲಿದ್ದಾರೆ.

Discussion about this post