ಮಂಡ್ಯದಲ್ಲಿ ಲೋಕ ಸಮರದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಸುಮಲತಾ ಪರ ಅಲೆ ಹೆಚ್ಚಾಗುತ್ತಿದ್ದಂತೆ ದಳಪತಿಗಳ ಬಿಪಿಯೂ ಏರಿಕೆಯಾಗುತ್ತಿದೆ.
ಅತ್ತ ಪ್ರಜ್ವಲ್ ರೇವಣ್ಣ ಗೆಲ್ತಾರೆ, ನಿಖಿಲ್ ಸೋಲ್ತಾರೆ ಅನ್ನುವ ಸುದ್ದಿ ಹರಡಿರುವುದರಿಂದ ಶಾಸಕಿ ಅನಿತಾ ಕುಮಾರಸ್ವಾಮಿ ಗಲಿಬಿಲಿಗೊಂಡಿದ್ದಾರೆ. ಕುಮಾರಸ್ವಾಮಿಗೆ ಮಗನ ಗೆಲುವು ಎಷ್ಟು ಮುಖ್ಯವೋ, ಕುಟುಂಬದೊಳಗೆ ನಿಖಿಲ್ ಗೆಲುವು ಅನಿತಾ ಅವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ.
ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರು ನಿಖಿಲ್ ಗೆ ಕೈ ಕೊಟ್ಟಿದ್ದು, ಸುಮಲತಾ ಗೆಲುವಿಗಾಗಿ ಅವರು ಕೈ ಜೋಡಿಸಿದ್ದಾರೆ. ಈ ಸಂಬಂಧ ಹಲವರನ್ನು ಕಾಂಗ್ರೆಸ್ ಅಮಾನತು ಮಾಡಿದ್ರೂ, ಕೈ ಕಾರ್ಯಕರ್ತರು, ಸ್ಥಳೀಯ ನಾಯಕರು ಜಪ್ಪಯ್ಯ ಅಂದ್ರೂ ಜಗ್ಗುತ್ತಿಲ್ಲ.
ಇಷ್ಟೆಲ್ಲಾ ಬೆಳವಣಿಗೆ ನಡುವೆ ಸಿದ್ದರಾಮಯ್ಯ ನಿಖಿಲ್ ಸೋಲಿಗೆ ಕಾರಣರಾಗ್ತಾರೆ ಅನ್ನುವ ಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹೀಗಾಗಿ ಪ್ರಸ್ತುತ ಬೆಳವಣಿಗೆಯಿಂದ ಆತಂಕಗೊಂಡಿರುವ ಅನಿತಾ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಂಡ್ಯ ಕ್ಷೇತ್ರದಿಂದ ದೋಸ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿ, ಮಾ. 25ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ, ನಾಮಪತ್ರ ಸಲ್ಲಿಕೆ ವೇಳೆ ಮಂಡ್ಯಕ್ಕೆ ಬರಬೇಕು ಎಂದು ನಗರದ ಕಾವೇರಿ ನಿವಾಸಕ್ಕೆ ತೆರಳಿ ಅನಿತಾ ಕುಮಾರಸ್ವಾಮಿ, ಸಿದ್ದರಾಮಯ್ಯರಿಗೆ ಆಹ್ವಾನ ನೀಡಿದ್ದಾರೆ. ಮಾತ್ರವಲ್ಲದೆ ನಿಖಿಲ್ ಪರ ಪ್ರಚಾರ ಮಾಡಿ ಎಂದು ಮನವಿ ಕೂಡಾ ಮಾಡಿಕೊಂಡಿದ್ದಾರೆ.
ಇದೇ ವೇಳೆ, ದೋಸ್ತಿ ಅಭ್ಯರ್ಥಿ ನಿಖಿಲ್ ಪರ ಕಾಂಗ್ರೆಸ್ ಮುಖಂಡರು ಕೆಲಸ ಮಾಡುತ್ತಿಲ್ಲ ಅಂತಾ ಅಸಮಾಧಾನ ಹೊರಹಾಕಿರುವ ಅನಿತಾ ಮೈತ್ರಿ ಧರ್ಮದಂತೆ ಕಾಂಗ್ರೆಸ್ ಮುಖಂಡರು ನಿಖಿಲ್ ಪರ ಕೆಲಸ ಮಾಡಬೇಕು. ಆದರೆ, ಮಂಡ್ಯ ನಾಯಕರಲ್ಲಿ ಅಂತಹ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಸುವ ವೇಳೆ ನಿಮ್ಮ ಪಕ್ಷದ ಸ್ಥಳೀಯ ಮುಖಂಡರು ಹಾಜರಿ ಇರುವಂತೆ ಸೂಚನೆ ನೀಡಿ ಎಂದು ಕೋರಿದ್ದಾರಂತೆ.
ಆದರೆ ಸಿದ್ದರಾಮಯ್ಯ ಏನು ಉತ್ತರ ಕೊಟ್ಟಿದ್ದಾರೋ ಗೊತ್ತಿಲ್ಲ, ಇನ್ನೇನು ಆಯ್ತು ಅಂದಿರುತ್ತಾರೆ.
Discussion about this post