ರಾಜ್ಯದೆಲ್ಲೆಡೆ ಸುರಿಯುತ್ತಿರುವ ಮಹಾಮಳೆ ಜನ ಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ಸಾಲು ಸಾಲು ರಜೆಯ ಸಂಭ್ರಮದಲ್ಲಿದ್ದ ಮಂದಿಗೂ ಮಳೆ ಶಾಕ್ ಕೊಟ್ಟಿದೆ.
ಬೆಂಗಳೂರು ಮಹಾನಗರವನ್ನು ಕರಾವಳಿ ಭಾಗಗಳೊಂದಿಗೆ ಸಂಪರ್ಕಿಸುವ ಮೂರು ಪ್ರಮುಖ ಘಾಟಿ ರಸ್ತೆಗಳಾದ ಚಾರ್ಮಾಡಿ, ಶಿರಾಡಿ ಮತ್ತು ಸಂಪಾಜೆ ಘಾಟಿಗಳು ಸಂಪೂರ್ಣ ಬಂದ್ ಆಗಿದೆ.
ಈ ನಡುವೆ ಬೆಂಗಳೂರಿನಿಂದ ಮಂಗಳೂರು, ಉಡುಪಿ ಮತ್ತು ಕರಾವಳಿಯ ಇನ್ನಿತರ ಭಾಗಗಳಿಗೆ ಹೊರಡಬೇಕಾಗಿದ್ದ ಎಲ್ಲಾ ಬಸ್ ಸೇವೆಗಳು ರದ್ದುಗೊಂಡಿವೆ.
ಶುಕ್ರವಾರ ರಾತ್ರಿ 10.30ರ ಬಳಿಕ ಕೆ.ಎಸ್.ಆರ್.ಟಿ.ಸಿ ಸಹಿತ ಎಲ್ಲಾ ಖಾಸಗಿ ಟ್ರಾವೆಲ್ಸ್ ಗಳು ತಮ್ಮ ಪ್ರಯಾಣವನ್ನು ದಿಢೀರ್ ಆಗಿ ಮೊಟಕುಗೊಳಿಸಿವೆ.
ಘಾಟಿ ರಸ್ತೆಗಳಲ್ಲಿ ಮಣ್ಣು ಕುಸಿದಿರುವ ಕಾರಣದಿಂದ ಈಗಾಗಲೇ ತೆರಳಿರುವ ವಾಹನಗಳು ನಿಂತಲ್ಲೇ ನಿಂತಿವೆ. ಮಣ್ಣು ತೆರವುಗೊಳಿಸಿದ ನಂತರವಷ್ಟೇ ಈ ವಾಹನಗಳು ಸಂಚರಿಸಬೇಕಾಗಿದೆ.ಶನಿವಾರ ಮುಂಜಾನೆ ಹೊತ್ತಿಗೆ ವಾಹನ ಸಂಚಾರ ಆರಂಭಗೊಳ್ಳುವ ಸಾಧ್ಯತೆಗಳಿದ್ದು. ವಾಹನ ಸಂಚಾರ ಪ್ರಾರಂಭಗೊಂಡರೂ ಟ್ರಾಫಿಕ್ ಜಾಮ್ ವಿಪರೀತವಾಗುವ ಭಯವೂ ಕಾಡುತ್ತಿದೆ.
ಹೀಗಾಗಿ ಮುಂಜಾನೆಯ ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರದ ಕುರಿತಂತೆ ನಿರ್ಧಾರ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರು ಕಡೆ ಬರಬೇಕಾಗಿದ್ದ ಹಾಗೂ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗಬೇಕಾಗಿದ್ದ KSRTC ಬಸ್ಸುಗಳು ಶುಕ್ರವಾರ ರಾತ್ರಿ 10 ಗಂಟೆಗಳವರೆಗೆ ಸೀಮಿತ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿವೆ.
ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶ ಮತ್ತು ಹಾಸನದಲ್ಲಿ ಮಳೆಯ ಪ್ರಮಾಣ ಗಂಟೆಯಿಂದ ಗಂಟೆಗೆ ಏರಿಕೆಯಾಗುತ್ತಿದ್ದು, ಯಾವುದೇ ಸಂದರ್ಭದಲ್ಲೂ ಸಂಚಾರ ವ್ಯತ್ಯಯಗೊಳ್ಳುವ ಸಾಧ್ಯತೆಗಳಿವೆ.
ಈ ನಡುವೆ ಮಂಗಳೂರು ಬೆಂಗಳೂರು ನಡುವೆ ರೈಲು ಸಂಚಾರ ಈಗಾಗಲೇ ಸ್ಥಗಿತಗೊಂಡಿದ್ದು, ತುರ್ತು ಮತ್ತು ಅನಿವಾರ್ಯತೆ ಇರುವ ಮಂದಿ ವಿಮಾನ ಏರಬೇಕಾಗಿದೆ. ಆದರೆ ವಿಮಾನ ಯಾನ ಸಂಸ್ಥೆಗಳು ಟಿಕೆಟ್ ದರವನ್ನು 15 ಸಾವಿರಕ್ಕೆ ಏರಿಸಿದ್ದಾರೆ.
Discussion about this post