ಬೆಂಗಳೂರು : ಕೊರೋನಾ ಕಾರಣದಿಂದ ಈಗಾಗಲೇ ಭಾರತದ ಮಾಧ್ಯಮಗಳು ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಕರ್ನಾಟಕದಲ್ಲಿ ಮುದ್ರಣ ಹಾಗೂ ಸುದ್ದಿ ವಾಹಿನಿಗಳು ತಿಂಗಳ ಖರ್ಚು ವೆಚ್ಚವನ್ನು ಸರಿ ತೂಗಿಸಲು ಸರ್ಕಸ್ ಮಾಡುತ್ತಿದೆ. ಈ ಕಾರಣದಿಂದಲೇ ದೊಡ್ಡ ಮೊತ್ತದ ಸಂಬಳ ಹೊಂದಿದ್ದ ನೌಕರರನ್ನು ಮನೆಗೆ ಕಳುಹಿಸಲಾಗಿದೆ. ಇದರೊಂದಿಗೆ ಹಲವು ಸುತ್ತಿನ ಕಾಸ್ಟ್ ಕಟ್ಟಿಂಗ್ ಕೆಲಸಗಳು ಮುಕ್ತಾಯಗೊಂಡಿದೆ. ಹಾಗಿದ್ದರೂ ಕನ್ನಡದ ಕೆಲ ಸುದ್ದಿ ವಾಹಿನಿಗಳು ತಿಂಗಳ ವೇತನ ಕೊಡಲು ಪರದಾಡುತ್ತಿದೆ.
ಈ ನಡುವೆ ಇತ್ತೀಚೆಗೆ ಸಿಕ್ಕಾಪಟ್ಟ ಸದ್ದು ಮಾಡುತ್ತಿರುವುದು ಟಿನಿ5 ಕನ್ನಡ ಸುದ್ದಿ ವಾಹಿನಿ. ಸಿದ್ದರಾಮಯ್ಯ, ಡಿಕೆಶಿವಕುಮಾರ್ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ತೀರಾ ಕೆಟ್ಟ ಭಾಷೆಗಳನ್ನು ಬಳಸಿ ಬೈಯಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ವಕ್ತಾರರನ್ನೇ ನಾಚಿಸುವಂತೆ ಅಬ್ಬರಿಸುತ್ತಿರುವ ಸುದ್ದಿವಾಚಕರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದರಲ್ಲೂ ಬಿಜೆಪಿ ಪರ ಇರುವ ಸಾಮಾಜಿಕ ಜಾಲತಾಣ ಖಾತೆಗಳು ಈ ವಾಹಿನಿ ವಿರುದ್ಧ ಮುಗಿಬಿದ್ದಿವೆ. ಈ ಹಿಂದೆಯೂ ಒಂದೇ ಪಕ್ಷದ ಪರ ಕೆಲಸ ಮಾಡಿದ ಕೆಲ ವಾಹಿನಿಗಳು ಇತ್ತು. ಆದರೆ ಈ ಮಟ್ಟಿಗೆ ಅದು ಅಬ್ಬರಿಸಿ ಇರಲಿಲ್ಲ. ತಮ್ಮ ವಿರೋಧಿಗಳ ಬಗ್ಗೆ ಈ ರೀತಿ ಕೆಟ್ಟ ಭಾಷೆಗಳನ್ನು ಪ್ರಯೋಗಿಸಿ ಇರಲಿಲ್ಲ. ಪಕ್ಷದ ನಾಯಕರೇ ಸ್ಥಾಪಿಸಿ ಮುನ್ನಡೆಸಿದ ವಾಹಿನಿಗಳು ಕೂಡಾ ಯಾವುದೇ ಮುಖಂಡರನ್ನು ಈ ರೀತಿ ಟಾರ್ಗೇಟ್ ಮಾಡಿರಲಿಲ್ಲ ಅನ್ನುವುದು ಇವರ ಆಕ್ರೋಶ.
ಇದರೊಂದಿಗೆ ಈ ವಾಹಿನಿ ಈ ರೀತಿ ಸುದ್ದಿ ಮಾಡಲು ಕಾರಣ ಟೂಲ್ ಕಿಟ್ ಎಂದು ಕೆಲವರು ಟೀಕಿಸಿದ್ದರು ಕೂಡಾ. ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಟಿವಿ5 ವಿರುದ್ದ ಆಕ್ರೋಶ ಜೋರಾಯ್ತೋ, ಶ್ರೀಲಕ್ಷ್ಮೀ ರಾಜ್ ಕುಮಾರ್ ಅನ್ನುವ ಸುದ್ದಿವಾಚಕರು ರಾಜೀನಾಮೆ ಕೊಟ್ಟಿದ್ದಾರೆ. ಕಾರಣವಿಲ್ಲದೆ ನಾನು ಯಾರನ್ನೂ ಟೀಕಿಸಲಾರೆ. ಯಾರದ್ದೋ ಒತ್ತಡಕ್ಕೆ ಮಣಿದು ಕೆಲಸ ಮಾಡಲಾರೆ. ಯಾರದ್ದೋ ಮುಖವಾಣಿಯಾಗಿರುವುದು ನನಗೆ ಸಾಧ್ಯವಿಲ್ಲ ಎಂದು ಅವರು ರಾಜೀನಾಮೆಗೆ ಕಾರಣ ಕೊಟ್ಟಿದ್ದರು.
ಇದನ್ನೂ ಓದಿ : TV5ಗೆ ರಾಜೀನಾಮೆ ಕೊಟ್ಟ ಶ್ರೀಲಕ್ಷ್ಮಿ :ದೇವಸ್ಥಾನದ ಪ್ರಸಾದ ತಿಂದು ಬದುಕುವೆ ಅಂದಿದ್ಯಾಕೆ ಸುದ್ದಿ ವಾಚಕಿ
ಇದರ ಬೆನ್ನಲ್ಲೇ TV5 Executive Editor ಅಂದ್ರೆ ಚಾನೆಲ್ ಮುಖ್ಯಸ್ಥರಾಗಿದ್ದ ಚಂದನ್ ಶರ್ಮಾ ಅವರೇ ರಾಜೀನಾಮೆ ಕೊಟ್ಟು ಹೊರ ಬಂದಿದ್ದಾರೆ ಅನ್ನುವ ಸುದ್ದಿ ಬಂದಿದೆ. ಕನ್ನಡದ ಆರ್ನಬ್ ಎಂದೇ ಹೆಸರು ಮಾಡಿರುವ ಚಂದನ್ ಮಾಧ್ಯಮ ಲೋಕಕ್ಕೆ ಮುಖಮಾಡಿರದೇ ಹೋಗಿರುತ್ತಿದ್ರೆ ಸಾಫ್ಟ್ ವೇರ್ ಇಂಜಿನಿಯರ್ ಆಗಿರುತ್ತಿದ್ರು. ಆದರೆ ಟಿಎನ್ ಸೀತಾರಾಮ್ ಗರಡಿಯಲ್ಲಿ ಪಳಗಿದ ಚಂದನ್ ಧಾರವಾಹಿಗಳಲ್ಲಿ ಮಾಡಿದ ಪಾತ್ರಗಳು ಇಂದಿಗೂ ಜನರ ಕಣ್ಣ ಮುಂದಿದೆ.
ಕಿರುತೆರೆಯಿಂದ ಬಿಟಿವಿ ಸುದ್ದಿವಾಹಿನಿಗೆ ಎಂಟ್ರಿಕೊಟ್ಟ ಚಂದನ್, ಆರ್ನಬ್ ಶೈಲಿಯನ್ನು ಕನ್ನಡಕ್ಕೆ ತಂದಿದ್ದರು. ಈ ಮೂಲಕ ತನ್ನದೇ ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದ್ದ ಚಂದನ್ ಬಳಿಕ ಪವರ್ ಟಿವಿ ಸಂಸ್ಥೆಯ ಮುಖ್ಯಸ್ಥರಾಗಿ ಹೋಗಿದ್ದರು. ಇದಾದ ಬಳಿಕ ಚಂದನ್ ಶರ್ಮಾ ಕಾಣಿಸಿಕೊಂಡಿದ್ದು TV5 ವಾಹಿನಿಯಲ್ಲಿ.
ಆದರೆ ಈ ಸಂದರ್ಭದಲ್ಲಿ ಚಂದನ್ ಶರ್ಮಾ ತೆರೆ ಮೇಲೆ ಕಾಣಿಸಿಕೊಂಡಿರುವುದಕ್ಕಿಂತಲೂ ಕೊರೋನಾ ಪೀಡಿತರಿಗೆ ಸಹಾಯ ಮಾಡೋ ಕೆಲಸದಲ್ಲಿ ಮುಳುಗಿ ಹೋಗಿದ್ದರು. ಬೆಡ್ ವ್ಯವಸ್ಥೆ, ಇಂಜೆಕ್ಷನ್ ಎಂದು ನಡುರಾತ್ರಿಯಲ್ಲೂ ಓಡಾಡುತ್ತಿದ್ದರು.
ಇದೀಗ ಚಂದನ್ ಶರ್ಮಾ TV5 Executive Editor ಹುದ್ದೆಗೆ ರಾಜೀನಾಮೆ ಕೊಟ್ಟಿರುವ ಸುದ್ದಿ ಬಂದಿದೆ. ಮತ್ತೆ ಪವರ್ ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಾಗಾದ್ರೆ ಚಂದನ್ ಶರ್ಮಾ ರಾಜೀನಾಮೆಗೆ ಕಾರಣವೇನು. ಶ್ರೀಲಕ್ಷ್ಮಿ ರಾಜ್ ಕುಮಾರ್ ( sri lakshmi journalist) ಕೊಟ್ಟಿರುವ ಕಾರಣವೇ ಚಂದನ್ ಅವರಿಗೂ ಅನ್ವಯಿಸುತ್ತಾ, ಗೊತ್ತಿಲ್ಲ ಚಂದನ್ ಶರ್ಮಾ ಅವರೇ ಉತ್ತರಿಸಬೇಕು.
Discussion about this post