ಬೆಂಗಳೂರು : ಅಭಿನಯ ಚಕ್ರವರ್ತಿ ಖ್ಯಾತಿಯ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿದೆ. ಕಿಚ್ಚನಿಗೆ ಏನಾಗಿದೆ ಅನ್ನುವ ಕುರಿತಂತೆ ಯಾವುದೇ ಸ್ಪಷ್ಟ ಮಾಹಿತಿಗಳು ಹೊರ ಬರುತ್ತಿಲ್ಲ. ಕೆಲವರು ಸುದೀಪ್ ಜ್ವರದಿಂದ ಬಳಲುತ್ತಿದ್ದಾರೆ ಅನ್ನುವುದು ಅವರ ಮ್ಯಾನೇಜರ್ ಹೇಳುತ್ತಿರುವ ಮಾತು. ಆದರೆ ವಿಶ್ವದೆಲ್ಲೆಡೆ ಹರಡಿರುವ ಮಹಾಮಾರಿಯ ಕಾರಣದಿಂದ ಅವರ ಅಭಿಮಾನಿಗಳಲ್ಲಿ ಈ ಸುದ್ದಿ ಆತಂಕ ಹುಟ್ಟಿಸಿದೆ.
ಈ ನಡುವೆ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅದರ ಮೂಲಕವೇ ಅಭಿಮಾನಿಗಳ ಜೊತೆಗೆ ಸಂವಾದ ನಡೆಸುತ್ತಿದ್ದಾರೆ. ಹೀಗಾಗಿ ಆತಂಕ ಪಡುವಂತದ್ದು ಇಲ್ಲ ಅನ್ನುವುದು ನೆಮ್ಮದಿಯ ಸುದ್ದಿ.
ಇನ್ನು ಕಿಚ್ಚ ಬೇಗ ಚೇತರಿಸಿಕೊಳ್ಳಲಿ, ಆರೋಗ್ಯವಂತರಾಗಿ ಬರಲಿ ಎಂದು ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನಾಡಿನ ಹಲವು ದೇವಾಲಯಗಳಲ್ಲಿ ಕಿಚ್ಚನ ಹೆಸರಿನಲ್ಲಿ ಪೂಜೆಗಳು ನಡೆದಿವೆ. ಹೀಗೆ ಚನ್ನಗರಿಯ ಅಖಿಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್ ಷಾ ಕಿಚ್ಚ ಸುದೀಪ್ ಸೇನೆ ಸದಸ್ಯರು ನೆಚ್ಚಿನ ನಾಯಕನ ಆರೋಗ್ಯ ವೃದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಲ್ಲಿನ ಅಂಜನೇಯನ ದೇವಸ್ಥಾನದಲ್ಲಿ ಈ ಪೂಜೆ ನಡೆದಿದೆ.
ಇನ್ನು ಅಭಿಮಾನಿಗಳ ಅಭಿಮಾನ, ಪ್ರೀತಿ, ಅಕ್ಕರೆ, ಕಾಳಜಿ ಕಂಡು ಕರಗಿರುವ ಕಿಚ್ಚ ಸುದೀಪ್, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
Discussion about this post