ಚಿಕ್ಕಣ್ಣ ಟಿವಿಯಲ್ಲಿ ನಿರೂಪಕನಾಗಿದ್ದ ವೇಳೆ ಈಗಿನಂತೆ ಹಾಸ್ಯಭರಿತ ರಿಯಾಲಿಟಿ ಶೋ ಗಳು ಇರಲಿಲ್ಲ. ಒಂದು ವೇಳೆ ಆಗ್ಲೇ ಕಾಮಿಡಿ ರಿಯಾಲಿಟಿ ಶೋ ಇರುತ್ತಿದ್ದರೆ ಚಿಕ್ಕಣ್ಣ ಹೇಗಿರುತ್ತಿದ್ದರು ಊಹಿಸಿ.ಆದರೆ ಅದು ಅವರ ಪಾಲಿಗೆ ಒಳ್ಳೆಯದೇ ಆಯ್ತು ಅನ್ನಿಸುತ್ತದೆ.
ಟಿವಿ ಶೋ ನಡೆಸಿಕೊಡುತ್ತಿದ್ದ ಚಿಕ್ಕಣ್ಣ ಆಗ ಜೇಬಿನಲ್ಲಿ ಫೋಟೋ ಹಿಡಿದುಕೊಂಡೇ ತಿರುಗುತ್ತಿದ್ದರು. ಮುಹೂರ್ತ ಸಮಾರಂಭಗಳಿಗೆ ಹೋಗಿ ನಿರ್ದೇಶಕರನ್ನು ಭೇಟಿಯಾಗಿ ಅವಕಾಶ ಕೊಡಿ ಸಾರ್ ಎಂದು ಫೋಟೋ ಕೊಟ್ಟು ಬರುತ್ತಿದ್ದರು. ಆದರೆ ಆಗ ಅವಕಾಶ ಸಿಗಬಹುದು ಅನ್ನುವ ನಿರೀಕ್ಷೆ ಇತ್ತು. ಆದರೆ ಈ ಮಟ್ಟಿಗೆ ಸ್ಟಾರ್ ಪಟ್ಟ ಸಿಗುತ್ತದೆ ಅನ್ನುವ ನಿರೀಕ್ಷೆ ಇರಲಿಲ್ಲ.
ಆ ದಿನಗಳಲ್ಲಿ ದಿನದ ಖರ್ಚು ಹೇಗಪ್ಪ ನಿಭಾಯಿಸುವುದು ಅನ್ನುವುದೇ ಅವರ ತಲೆನೋವಾಗಿತ್ತು.
ಸಿಕ್ಕರೆ ಸಿಗುತ್ತದೆ, ಹೇಗೋ ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮ ಕೈ ಬಿಡುವುದಿಲ್ಲ ಅನ್ನುವ ನಿರೀಕ್ಷೆ ಇತ್ತು. ಅದರಲ್ಲೇ ಜೀವನ ನಡೆಸಬಹುದು ಅನ್ನುವ ಧೈರ್ಯವೂ ಇತ್ತು.
ಆದರೆ ಯಶ್ ತಮ್ಮ ಕಿರಾತಕ ಸಿನಿಮಾದಲ್ಲಿ ಕೊಟ್ಟ ಅವಕಾಶ ಚಿಕ್ಕಣ್ಣ ಅವರನ್ನು ದೊಡ್ಡಣ್ಣನಾಗಿ ಮಾಡಿತು. ಹಾಸ್ಯ ನಟರಿಗಾಗಿ ಪರದಾಡುತ್ತಿದ್ದ ಚಂದನವನಕ್ಕೆ ಚಿಕ್ಕಣ್ಣ ನಕ್ಷತ್ರವಾಗಿ ಹೋದರು. ಈಗ ಅವರು ನಟಿಸಿದ ಸಿನಿಮಾಗಳ ಸಂಖ್ಯೆ 50 ಗಡಿ ದಾಟಿದೆ.
7 ವರ್ಷಗಳಲ್ಲಿ 50ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸುವುದು ಅಂದರೆ ಸುಲಭದ ಮಾತಲ್ಲ.
ಆದರೆ ಇಷ್ಟೆಲ್ಲಾ ಬೇಡಿಕೆ ಚಿಕ್ಕಣ್ಣ ಒಂದಿಷ್ಟು ಬದಲಾಗಿಲ್ಲ. ಅವರೇ ಹೇಳುವಂತೆ
“ ಆಗ 10 ರೂಪಾಯಿ ಊಟ ಮಾಡುತ್ತಿದ್ದೆ, ಈಗ 25 ರೂಪಾಯಿ ಊಟ. ಅದು ಬಿಟ್ಟರೆ ಎಲ್ಲಾ ಹಾಗೇ ಇದೆ. ಲೈಫ್ Change ಆಗಿಲ್ಲ”
ಹಾಗಂತ ಚಿಕ್ಕಣ್ಣ ಎಂದಿಗೂ ದೊಡ್ಡ ನಟನಾಗಬೇಕು ಎಂದು ಬಯಸಿದವರಲ್ಲ. ಸ್ಟಾರ್ ಪಟ್ಟ ಗಿಟ್ಟಬೇಕು ಎಂದು ಇಚ್ಛಿಸಿದವರಲ್ಲ. ನಟನೆಯ ಕಾರಣಕ್ಕೆ ಜನ ಮೆಚ್ಚಿದರು. ಚಿಕ್ಕಣ್ಣ ಇದ್ದರೆ ಚಿತ್ರಕ್ಕೆ ತೂಕ ಅಂದರು. ಹೀಗಾಗಿ ದೊಡ್ಡ ನಟನಾದರು, ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು.
ಇಷ್ಟೆಲ್ಲಾ ಸಾಧಿಸಿರುವ ಚಿಕ್ಕಣ್ಣ ಬಳಿ, ಸರ್ ನೀವು ಹೀರೋ ಯಾವಾಗ ಎಂದು ಕೇಳಿ ನೋಡಿ.
“ಈಗ ಚೆನ್ನಾಗಿದ್ದೇನೆ. ಚೆನ್ನಾಗಿರೋದು ಬೇಡ್ವ..? ಅವೆಲ್ಲಾ ಬೇಕಾ. ರಾಜಾ ಹುಲಿ ಬಿಡುಗಡೆಯಾದ ಸಂದರ್ಭದಲ್ಲಿ ಹಿರೋ ಆಗುವ ಅವಕಾಶ ಬಂದಿತ್ತು. ನಾನೇ ಬೇಡ ಅಂದೆ. ಹಿರೋ ಆಗಿ ಚಿತ್ರ ಗೆದ್ದರೆ ಸರಿ. ಸೋತರೆ..”?
ಚಿತ್ರ ಸೋತರೆ ನಿರ್ಮಾಪಕರು ಆ ಮೇಲೆ ಬೇರೆ ಚಿತ್ರಗಳಿಗೆ ಕರೆಯುವುದನ್ನೇ ನಿಲ್ಲಿಸುತ್ತಾರೆ. ಹಾಗಾಗಿಯೇ ನಾಯಕನಾಗುವ ಯೋಚನೆ ಬಿಟ್ಟು ಪಾತ್ರಗಳಿಗೆ ಸೀಮಿತವಾಗಲು ನಿರ್ಧರಿಸಿರುವ ಚಿಕ್ಕಣ್ಣ, ಕೋಟಿ ಕೊಟ್ಟರೂ ನಾಯಕನಾಗುವುದಿಲ್ಲ ಅನ್ನುತ್ತಾರೆ.
Discussion about this post