ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಎರಡು ಕುಟುಂಬಗಳು ವೈದ್ಯರೊಬ್ಬರ ಬಳಿ ಬಂದು ಕ್ಷಮೆ ಕೇಳಿ ಹೋಗಿದ್ದಾರೆ.
ಅವತ್ತು ನಾವು ಮಾಡಿದ್ದು ತಪ್ಪು, ನಮಗೆ ತಪ್ಪಿನ ಅರಿವಾಗಿದೆ ಕ್ಷಮಿಸಿ ಬಿಡಿ ಎಂದು ಆ ಕುಟುಂಬಗಳು ವೈದ್ಯರ ಕಾಲು ಹಿಡಿಯುವುದೊಂದು ಬಾಕಿ.
ಅಂದ ಹಾಗೇ ಈ ಕುಟುಂಬಗಳು ಕ್ಷಮೆ ಕೇಳಿದ್ದು 12 ವರ್ಷಗಳ ಹಿಂದೆ ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ.
ಅದು 2008ರ ಸಪ್ಟಂಬರ್ 26 ಉಪ್ಪಿನಂಗಡಿಯ ಧನ್ವಂತರಿ ಆಸ್ಪತ್ರೆಯ ( ಆಗ ಅದು ಕ್ಲಿನಿಕ್ ಆಗಿತ್ತು ). ವೈದ್ಯರಾಗಿದ್ದ ನಿರಂಜನ್ ರೈ ಮೇಲೆ ಅವರ ಕ್ಲಿನಿಕ್ ನಲ್ಲೇ ಹಲ್ಲೆ ನಡೆದಿತ್ತು.
2008ರ ಸಪ್ಟಂಬರ್ 25ರಂದು ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರ ಗಂಡ ವೈದ್ಯರು ದುರ್ವರ್ತನೆ ತೋರಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿದ್ದರು.
ನಿರಂಜನ್ ರೈ ಏನಾಯ್ತು ಅನ್ನುವುದನ್ನು ವಿವರಿಸಿದರು ಆತ ಕೇಳುವ ಸ್ಛಿತಿಯಲ್ಲಿ ಇರಲಿಲ್ಲ.
ಮತ್ತೆ ಮರುದಿನ ತನ್ನ ಬಳಗವನ್ನು ಕರೆದುಕೊಂಡು ಬಂದಿದ್ದ ಮಹಿಳೆಯ ಗಂಡ ಮತ್ತೆ ನಿರಂಜನ್ ರೈ ಅವರೊಂದಿಗೆ ಗಲಾಟೆ ಪ್ರಾರಂಭಿಸಿದ್ದಾನೆ. ವೈದ್ಯರು ಅದೆಷ್ಟು ತಿಳಿ ಹೇಳಿದರು ಆತ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಹೀಗಾಗಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದ ಗುಂಪು ಕ್ಲಿನಿಕ್ ಗೆ ಹಾನಿ ಮಾಡಿತ್ತು. ಇದರಿಂದ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿತ್ತು.
ಬಳಿಕ ವೈದ್ಯರು ಪೊಲೀಸ್ ಠಾಣೆಗೆ ದೂರು ನೀಡಿದರು.ಹಲ್ಲೆಕೋರರು ಕೂಡಾ ಪ್ರತಿದೂರು ದಾಖಲಿಸಿದರು.
ಇನ್ನೇನು ತನಿಖೆ ಪ್ರಾರಂಭವಾಗಬೇಕು ಅನ್ನುವಷ್ಟರಲ್ಲಿ ಕಾಂಪ್ರಮೈಸ್ ಮೂಲಕ ಠಾಣೆಗೆ ಕೊಟ್ಟಿದ್ದ ದೂರನ್ನು ವಾಪಾಸ್ ಪಡೆಯಲಾಗಿತ್ತು.
ಆದರೆ ಡಾ.ನಿರಂಜನ್ ರೈ ಅವರಿಗೆ ತುಂಬಾ ನೋವಾಗಿತ್ತು. ಮಾಡಬಾರದ ತಪ್ಪಿಗೆ ಬಂದ ಆರೋಪದಿಂದ ಅವರು ನೊಂದು ಹೋಗಿದ್ದರು. ಸಮಾಜದಲ್ಲಿ ತಲೆ ತಗ್ಗಿಸಬೇಕಾಗಿ ಬಂತಲ್ಲ ಎಂದು ಕೊರಗಿದ್ದರು.
ಹೀಗಾಗಿ ನೊಂದ ಮನಸ್ಸಿನಲ್ಲೇ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿ, ಒಂದಲ್ಲ ಒಂದು ಸತ್ಯವನ್ನು ಪ್ರಪಂಚಕ್ಕೆ ತೋರಿಸು ಎಂದು ಕೋರಿಕೊಂಡಿದ್ದರು.
ಇದಾಗಿ ಹಲವು ವರ್ಷಗಳೇ ಕಳೆದಿರಬಹುದು. ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಎರಡೂ ಕುಟುಂಬಗಳಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿತ್ತು. ಇನ್ನಿಲ್ಲದಂತೆ ಹಣಕಾಸಿನ ಸಮಸ್ಯೆಗಳು ಅವರನ್ನು ಕಾಡಲಾರಂಭಿಸಿದೆ ಜೊತೆಗೆ ಇಡೀ ಕುಟುಂಬ ಮಾನಸಿಕ ಹಿಂಸೆಗಳನ್ನು ಎದುರಿಸುವಂತಾಗಿದೆ.
ಏಕಾಏಕಿ ಬಂದ ಸಮಸ್ಯೆ ಆತಂಕಗೊಂಡ ಕುಟುಂಬ ಸದಸ್ಯ ಜ್ಯೋತಿಷಿಯೊಬ್ಬರ ಬಳಿ ಹೋಗಿದ್ದಾರೆ. ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರಣಿಕ ಕಾಣಿಸಿಕೊಂಡಿದೆ. ಸುಳ್ಳು ಆರೋಪದ ವೈದ್ಯರ ಮೇಲೆ ಮಾಡಿದ ಪಾಪ ಸುತ್ತಿಕೊಂಡಿರುವುದು ಗೊತ್ತಾಗಿದೆ.
ಹೀಗಾಗಿ ಜ್ಯೋತಿಷಿಗಳ ಸಲಹೆಯಂತೆ ವೈದ್ಯರ ಬಳಿ ಓಡಿ ಬಂದ ಕುಟುಂಬ ಕ್ಷಮಿಸುವಂತೆ ವಿನಂತಿಸಿದೆ. ಮಾತ್ರವಲ್ಲದೆ ಸ್ಥಳೀಯ ಪತ್ರಿಕೆಯೊಂದರಲ್ಲಿ ತಮ್ಮ ತಪ್ಪನ್ನು ಒಪ್ಪಿ ಜಾಹೀರಾತು ಬೇರೆ ಕೊಟ್ಟಿದ್ದಾರೆ.
ಈ ಎಲ್ಲಾ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ನಿರಂಜನ್ ರೈ, ಸತ್ಯ ಗೆದ್ದಿದೆ. 12 ವರ್ಷಗಳ ಬಳಿಕವಾದರೂ ಆರೋಪ ಮುಕ್ತನಾದೆನಲ್ಲ. ಮಾಡದ ತಪ್ಪಿಗೆ ಆನಾಹುತವೊಂದು ನಡೆದು ಹೋಯ್ತಲ್ಲ ಎಂದು ಕೊರಗುತ್ತಿದ್ದ ನನಗೆ ನೆಮ್ಮದಿ ಸಿಕ್ಕಿದೆ ಅಂದಿದ್ದಾರೆ.
Discussion about this post