ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ ಅನ್ನುವುದು ಹಳೆಯ ಮಾತು. ಕುಡಿತ ಅನ್ನುವುದು ಅದೆಷ್ಟು ಮನೆಗಳಿಗೆ ಕೊಳ್ಳಿ ಹಂಚಿದೆ, ಅದೆಷ್ಟು ಸಂಸಾರಗಳನ್ನು ಸರ್ವನಾಶ ಮಾಡಿದೆಯೋ ಗೊತ್ತಿಲ್ಲ. ತಂದೆಯ ಕುಡಿತದ ಚಟದಿಂದ ಬೀದಿ ಪಾಲಾದ ಮಕ್ಕಳೆಷ್ಟು ಲೆಕ್ಕವಿಟ್ಟವರು ಯಾರೂ ಹೇಳಿ.
ಕುಡಿತದ ಚಟ ಅಪಾಯ ಅನ್ನುವುದನ್ನು ಅರಿತುಕೊಂಡ ಮಂದಿ ಕುಡಿತ ಬಿಟ್ಟು ಉದ್ಧಾರವಾದ ಕಥೆಯೂ ಸಾಕಷ್ಟಿದೆ.
ಈ ನಡುವೆ ತಮಿಳುನಾಡಿನ ಬಾಲಕಿಯೊಬ್ಬಳು ಮೌನ ವೃತ ಕೈಗೊಂಡು ತಂದೆಯ ಕುಡಿತದ ಚಟ ಬಿಡಿಸದ ಅಪರೂಪದ ಘಟನೆ ನಡೆದಿದೆ.
ತಮಿಳುನಾಡು ತಿರುವರೂರು ಜಿಲ್ಲೆಯ ತಿರುತುರೈಪೋಡಿ ಬಳಿಯ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ನಾಧಿಯಾ ತಂದೆ ಕುಡಿತದ ದಾಸನಾಗಿ ಹೋಗಿದ್ದ.
ತಂದೆಯ ಕುಡಿತದ ಚಟದಿಂದ 11 ವರ್ಷದ ನಾಧಿಯಾ ಓದಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ತಾಯಿಯೊಂದಿಗೆ ನಿತ್ಯ ಜಗಳವಾಡುತ್ತಿದ್ದ ತಂದೆಯ ನಡವಳಿಕೆಯಿಂದ ಮಗಳು ಬೇಸತ್ತು ಹೋಗಿದ್ದಳು.
ಹೀಗಾಗಿ ಹೇಗಾದರೂ ಸರಿ ಅಪ್ಪನನ್ನು ಮದ್ಯದ ಚಟದಿಂದ ಬಿಡಿಸಲೇಬೇಕು ಎಂದು ನಿರ್ಧರಿಸಿದ ನಾದಿಯಾ ಮೌನ ಹೋರಾಟಕ್ಕೆ ನಿರ್ಧರಿಸಿದಳು.
ತಂದೆ ಶಿವಕುಮಾರ್ ಜೊತೆ ಮಾತು ಬಿಟ್ಟ ನಾಧಿಯಾ, ಮದ್ಯಪಾನ ಬಿಟ್ಟರೆ ಮಾತ್ರ ಮಾತು ಎಂದು ಕಡ್ಡಿ ಮುರಿದಂತೆ ಹೇಳಿದಳು. ಆದರೆ ಶಿವಕುಮಾರ್ ಇದಕ್ಕೆ ಕ್ಯಾರೆ ಅನ್ನಲಿಲ್ಲ. ಹೀಗೆ ಆರು ತಿಂಗಳ ಕಾಲ ನಾಧಿಯಾ ಮೌನ ಹೋರಾಟ ಸಾಗಿತ್ತು.
ಒಂದೆರೆಡು ತಿಂಗಳು ಕಳೆಯುವಷ್ಟರಲ್ಲಿ ಮಗಳು ತನ್ನ ಜೊತೆ ಮಾತನಾಡುತ್ತಿಲ್ಲ ಅನ್ನುವ ಕೊರಗು ಶಿವಕುಮಾರ್ ಕಾಡಲಾರಂಭಿಸಿತ್ತು. ಹೀಗಾಗಿ ಮಗಳ ಜೊತೆ ಮಾತನಾಡಲು ಯತ್ನಿಸಿದ್ದ. ಆದರೆ ಜಪ್ಪಯ್ಯ ಅಂದರೂ ನಾಧಿಯಾ ಜಗ್ಗಲಿಲ್ಲ.
ಕೊನೆಗೆ ಮಗಳ ಮೌನ ಯುದ್ಧಕ್ಕೆ ಸೋತ ಶಿವಕುಮಾರ್ ಕುಡಿತ ಬಿಡಲು ನಿರ್ಧರಿಸಿದ. ಈ ವೇಳೆ ಪಾಪ ಪ್ರಜ್ಞೆಯಿಂದ ಕೊರಗಿದ ಶಿವಕುಮಾರ್ ಕ್ಷಮೆಯನ್ನೂ ಕೇಳಿದ್ದಾನೆ. ಈ ವೇಳೆ ತನ್ನ ಶಾಲೆಯ ಹತ್ತಿರದ ಕೊಳವನ್ನು ಸ್ವಚ್ಛಗೊಳಿಸಿದರೆ ನಿನ್ನ ಜೊತೆ ಮಾತು ಎಂದು ನಾಧಿಯಾ ತಂದೆಗೆ ಹೇಳಿದ್ದಾಳೆ.
ಮಗಳ ಷರತ್ತನ್ನು ಸಂತೋಷದಿಂದ ಒಪ್ಪಿಕೊಂಡ ಶಿವಕುಮಾರ್ ವಿಶ್ವ ಹೆಣ್ಣು ಮಕ್ಕಳ ದಿನವಾದ ಸೆಪ್ಟಂಬರ್ 22 ರಂದು ಕೊಳವನ್ನು ಸ್ವಚ್ಛಗೊಳಿಸುವ ಮೂಲಕ ಮಗಳ ಹೆಮ್ಮೆಯ ತಂದೆಯಾಗಿದ್ದಾರೆ.
ಡೆಕ್ಕನ್ ಹೆರಾಲ್ಡ್ ಇನ್ ಪುಟ್ ಆಧಾರದಲ್ಲಿ ಈ ಸುದ್ದಿಯನ್ನು ಸಿದ್ದಪಡಿಸಲಾಗಿದೆ.
Discussion about this post